ADVERTISEMENT

ನಾಗೇಶ್ ಮನೆ ಮೇಲೆ ವ್ಯವಸ್ಥಿತ ದಾಳಿಯ ಪ್ರಯತ್ನ: ಆರಗ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 20:13 IST
Last Updated 1 ಜೂನ್ 2022, 20:13 IST
ತಿಪಟೂರಿನಲ್ಲಿನ ಶಿಕ್ಷಣ ಸಚಿವರ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದರು
ತಿಪಟೂರಿನಲ್ಲಿನ ಶಿಕ್ಷಣ ಸಚಿವರ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದರು   

ತಿಪಟೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಯ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಲು ಯತ್ನಿಸಿರುವುದು ಖಂಡನೀಯ. ಕಾಂಗ್ರೆಸ್‌ಗೆ ಈ ದುರ್ಗತಿ ಬರಬಾರದಿತ್ತು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದಲ್ಲಿ ಬುಧವಾರ ಶಿಕ್ಷಣ ಸಚಿವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು, 15 ಜನರನ್ನು, ಎರಡು ವಾಹನಗಳನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಉಳಿದವರನ್ನು ಸಹ ಫೋಟೊ, ವಿಡಿಯೊ ಮಾಹಿತಿ ಪಡೆದು ವಶಕ್ಕೆ ಪಡೆಯಲಾಗುವುದು. ಸ್ಥಳೀಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ. ಹೊರಗಿನವರು ವ್ಯವಸ್ಥಿತವಾಗಿ ಬಂದಿರುವುದನ್ನು ನೋಡಿದರೆ ಶಿಕ್ಷಣ ಸಚಿವ ನಾಗೇಶ್ ಅವರ ಪ್ರಾಣ ತೆಗೆಯುತ್ತಿದ್ದರೆನೋ ಎನ್ನುವಂತಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬರಲಿದ್ದು, ಸಚಿವರ ಮನೆಗೆ, ಸಚಿವರಿಗೆ ಸೂಕ್ತ ಭದ್ರತೆ ನೀಡಲಾಗುವುದು’ ಎಂದು ಹೇಳಿದರು.

ಪ್ರತಿಭಟನೆಗೆ ಮೊದಲು ಪೊಲೀಸರಿಗೆ ಮಾಹಿತಿ ನೀಡಿ ಸಮ್ಮತಿ ಪಡೆದಿರಬೇಕು. ಅಥವಾ ಬೇರೆಡೆ ಪ್ರತಿಭಟನೆ ನಡೆಸಬಹುದಿತ್ತು. ಆದರೆ ಉದ್ದೇಶಿತವಾಗಿ ಈ ಕೃತ್ಯ ನಡೆಸಲಾಗಿದೆ ಎಂದರು.

ADVERTISEMENT

ಮನೆಯಲ್ಲಿ ಎಲ್ಲಿ ಬೆಂಕಿ ಹಚ್ಚಿಲಾಗಿದೆ ಎನ್ನುವುದನ್ನು ತೋರಿಸುವಂತೆ ಪರ್ತಕರ್ತರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಚಿವರು, ಬಟ್ಟೆಗೆ ಬೆಂಕಿ ಹಚ್ಚಲಾಗಿದೆ ಬಿಟ್ಟಿದ್ದರೆ ಮನೆಗೆ ಬೆಂಕಿ ಹಚ್ಚುತ್ತಿದ್ದರು. ನಮ್ಮ ಬಳಿ ಫೋಟೊ ಇವೆ. ಅವುಗಳನ್ನು ನಂತರ ಮಾಧ್ಯಮಕ್ಕೆ ನೀಡಲಾಗುವುದು ಎಂದರು.

ಪ್ರತಿಭಟನಕಾರರ ಮೇಲೆ
ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದರ ಬಗ್ಗೆ ಮಾಹಿತಿ
ಇಲ್ಲ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.