ADVERTISEMENT

‘ವಸತಿ ಅಕ್ರಮ ತಡೆಗೆ ಜಾಗೃತ ದಳ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 19:39 IST
Last Updated 14 ಜನವರಿ 2020, 19:39 IST

ಬೆಂಗಳೂರು: ವಿವಿಧ ವಸತಿ ಯೋಜನೆಗಳ ಅಕ್ರಮ ತಡೆಗೆ ಕೆಎಸ್‌ಆರ್‌ಟಿಸಿ, ಬೆಸ್ಕಾಂ ಮಾದರಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವ್ಯಾಪ್ತಿಯಲ್ಲಿ ರಾಜ್ಯಮಟ್ಟದ ‘ವಸತಿ ಜಾಗೃತ ದಳ’ ರಚಿಸಲು ಸರ್ಕಾರ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿದ ವಸತಿ ಸಚಿವ ವಿ.ಸೋಮಣ್ಣ, ‘ಹಿರಿಯ ಅಧಿಕಾರಿ ನೇತೃತ್ವದಲ್ಲಿ ಜಾಗೃತ ದಳ ರಚಿಸಲಾಗುವುದು. ಈ ಸಮಿತಿಯು ವಿವಿಧ ವಸತಿ ಯೋಜನೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ. ತಂಡದ ಅಧಿಕಾರ ವ್ಯಾಪ್ತಿಯನ್ನು ಇನ್ನಷ್ಟೇ ನಿಗದಿಪಡಿಸಬೇಕಿದೆ’ ಎಂದರು.

ಜಾಗೃತ ದಳದ ಕಾರ್ಯನಿರ್ವಹಣೆ, ಸಾಧಕ, ಬಾಧಕಗಳನ್ನು ನೋಡಿಕೊಂಡು ಜಿಲ್ಲಾ, ತಾಲ್ಲೂಕು ಮಟ್ಟಕ್ಕೆ ವಿಸ್ತರಿಸಲಾಗುವುದು ಎಂದು ಹೇಳಿದರು.

ADVERTISEMENT

ಆಧಾರ್ ಕಡ್ಡಾಯ: ಪ್ರಗತಿಯಲ್ಲಿ ಇರುವ ಹಾಗೂ ಇನ್ನು ಮುಂದೆ ಆಯ್ಕೆಯಾಗುವ ಫಲಾನುಭವಿಗಳ ಕುಟುಂಬ ಸದಸ್ಯರ ಆಧಾರ್, ಪಡಿತರ ಚೀಟಿಯನ್ನು ಜೋಡಣೆ ಮಾಡಲಾಗುತ್ತದೆ. ಇದರಿಂದ ಒಂದೇ ಕುಟುಂಬದ ವಿವಿಧ ಸದಸ್ಯರ ಹೆಸರಿನಲ್ಲಿ ವಸತಿ ಪಡೆದುಕೊಳ್ಳುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕಂದಾಯ ಕೋಶ: ವಿವಿಧ ವಸತಿ ಯೋಜನೆಗಳಿಗೆ ಅಗತ್ಯವಿರುವ ಜಮೀನು ಮಂಜೂರು, ಭೂಮಿ ಖರೀದಿ, ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ‘ಕಂದಾಯ ಕೋಶ’ ಸ್ಥಾಪಿಸಲಾಗುವುದು. ಇದರಿಂದ ಮನೆ ನಿರ್ಮಿಸಲು ಬೇಕಾದ ನಿವೇಶನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಸಚಿವರು ಹೇಳಿದರು.

ಐಇಸಿ ಅಕ್ರಮ: ‘ವಸತಿ ಇಲಾಖೆ ವ್ಯಾಪ್ತಿಯಲ್ಲಿ ಮಾಹಿತಿ, ಶಿಕ್ಷಣ, ಸಂವಹನ (ಐಇಸಿ) ಯೋಜನೆ ಮೂಲಕ ಕೋಟ್ಯಂತರ ಹಣ ದುರುಪಯೋಗ ಆಗಿದೆ. ಕೊಳಚೆ ಪ್ರದೇಶಗಳ ಬಡವರ ಮನವೊಲಿಕೆ ಹೆಸರಿನಲ್ಲಿ ಹಣ ಪಡೆದು ಸಾಧನಾ ಸಂಸ್ಥೆ ವಂಚಿಸಿದೆ. 2017–18ನೇ ಸಾಲಿನಲ್ಲಿ ₹2.50 ಕೋಟಿ ನೀಡಲಾಗಿದ್ದು, ನಂತರದ ಎರಡು ವರ್ಷಗಳಲ್ಲಿ ₹3.50 ಕೋಟಿ ನೀಡಬೇಕಿತ್ತು. ಅಕ್ರಮ ನಡೆದಿರುವುದು ನನ್ನ ಗಮನಕ್ಕೆ ಬಂದ ತಕ್ಷಣ ಹಣ ನೀಡುವುದನ್ನು ಸ್ಥಗಿತಗೊಳಿಸಿದ್ದು, ತನಿಖೆಗೆ ಆದೇಶಿಸಲಾಗಿದೆ’ ಎಂದು ತಿಳಿಸಿದರು.

ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಾಣಕ್ಕೆ ನೀಡುತ್ತಿರುವ ₹1.20 ಲಕ್ಷ ನೆರವನ್ನು ₹2 ಲಕ್ಷಕ್ಕೆ ಹೆಚ್ಚಿಸಲಾಗುವುದು
ವಿ.ಸೋಮಣ್ಣ, ವಸತಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.