ADVERTISEMENT

ಲೇಹ್‌ಗೆ ಪ್ರಧಾನಿ ಭೇಟಿ, ಭಾರತದ ಗಟ್ಟಿತನಕ್ಕೆ ಸಾಕ್ಷಿ: ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 8:28 IST
Last Updated 4 ಜುಲೈ 2020, 8:28 IST
ಹುಬ್ಬಳ್ಳಿಯಲ್ಲಿ ಶನಿವಾರ ರಕ್ತದಾನ ಶಿಬಿರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.
ಹುಬ್ಬಳ್ಳಿಯಲ್ಲಿ ಶನಿವಾರ ರಕ್ತದಾನ ಶಿಬಿರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.   

ಹುಬ್ಬಳ್ಳಿ: ಲೇಹ್‌ನ ನಿಮುಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಭಾರತ ಗಡಿ ವಿಷಯದಲ್ಲಿ ಎಷ್ಟೊಂದು ಗಟ್ಟಿಯಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಎಸ್‌.ಡಿ. ಜಾಧವ್‌ ಜಿ. ಛಡ್ಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಭವಾನಿನಗರದ ರಾಯರಮಠದಲ್ಲಿ ಬ್ರಾಹ್ಮಣರಿಗಾಗಿ ಹಮ್ಮಿಕೊಂಡಿದ್ದ ರಕ್ತದಾನದ ಶಿಬಿರದಲ್ಲಿ ಭಾರತೆ ಮಾತೆಗೆ ಪುಷ್ಪ ನಮನ ಸಲ್ಲಿಸಿ ಮಾಧ್ಯಮದವರ ಜೊತೆ ಅವರು ಮಾತನಾಡಿದರು.

‘ದೇಶ, ಗಡಿ, ನೆಲ ಮತ್ತು ಸಂಸ್ಕೃತಿ ರಕ್ಷಣೆಯ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಎನ್ನುವುದನ್ನು ಪ್ರಧಾನಿ ಚೀನಾಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಕೋವಿಡ್‌ ಸಂಕಷ್ಟದ ಕಾಲದಲ್ಲಿಯೂ ದೇಶವನ್ನು ಸಮರ್ಥವನ್ನು ಮುನ್ನಡೆಸುತ್ತಿದ್ದಾರೆ’ ಎಂದರು.

ADVERTISEMENT

‘ಭಾರತದ ಇತಿಹಾಸದಲ್ಲಿ ನಾವು ಯಾರ ಮೇಲೂ ಯುದ್ಧ ಮಾಡಿಲ್ಲ, ಅತಿಕ್ರಮಣ ಕೂಡ ಮಾಡಲು ಹೋಗಿಲ್ಲ. ಬೇರೆ ದೇಶಗಳು ನಮ್ಮ ನೆಲದಲ್ಲಿ ದುಸ್ಸಾಹಸ ಮಾಡಲು ಪ್ರಯತ್ನಿಸಿದರೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ. ಒಂದು ಮನೆ ಹಾಗೂ ಮನೆತನಕ್ಕೆ ಸೇವೆಯನ್ನು ಮೀಸಲಿಟ್ಟಿರುವ ಕಾಂಗ್ರೆಸ್‌ ಪಕ್ಷದಲ್ಲಿದ್ದುಕೊಂಡು ಸಿದ್ದರಾಮಯ್ಯ ಪ್ರಧಾನಿ ಬಗ್ಗೆ ಅಸಭ್ಯವಾಗಿ ಮಾಡಿದ ಟೀಕೆಗೆ ಪ್ರಧಾನಿ ತಮ್ಮ ಕಾರ್ಯದ ಮೂಲಕವೇ ಉತ್ತರ ಕೊಟ್ಟಿದ್ದಾರೆ’ ಎಂದು ತಿರುಗೇಟು ನೀಡಿದರು.

ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆಯಲ್ಲವೇ ಎನ್ನುವ ಪ್ರಶ್ನೆಗೆ ‘ಜಾಗತಿಕ ಆರೋಗ್ಯ ತಜ್ಞರು ಜೂನ್‌ ವೇಳೆಗೆ ಭಾರತದ ನಾಲ್ಕು ಕೋಟಿ ಜನರಿಗೆ ಸೋಂಕು ಹರಡುತ್ತದೆ ಎಂದು ಅಂದಾಜಿಸಿದ್ದರು. ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಇದುವರೆಗೆ ಆರು ಲಕ್ಷ ಜನರಿಗೆ ಮಾತ್ರ ಸೋಂಕು ಹರಡಿದೆ. ಇದರಲ್ಲಿ ಮೂರು ಲಕ್ಷಕ್ಕಿಂತಲೂ ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ. ಭಾರತದ ಜನಸಂಖ್ಯೆಗೆ ಹೋಲಿಸಿದರೆ ಸೋಂಕು ಸಮುದಾಯಕ್ಕೆ ಹರಡಿಲ್ಲ ಎನ್ನುವುದು ಸ್ಪಷ್ಟ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.