ADVERTISEMENT

ಪ್ರವಾಹ ಪರಿಸ್ಥಿತಿಯಲ್ಲಿಯೂ ಖಾಸಗಿ ವಿಮಾನ ಸಂಸ್ಥೆಗಳು ಹಣಮಾಡುತ್ತಿವೆ: ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2018, 10:47 IST
Last Updated 16 ಆಗಸ್ಟ್ 2018, 10:47 IST
   

ಬೆಂಗಳೂರು: ಕೇರಳ ಮತ್ತು ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಈ ಸಂದರ್ಭದಲ್ಲಿ ಖಾಸಗಿ ವಿಮಾನ ಸಂಸ್ಥೆಗಳು ಹಣ ಮಾಡುವಲ್ಲಿ ತೊಡಗಿವೆ. ಇದು ನಾಚಿಕೆಯ ಸಂಗತಿ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

ಪ್ರಸ್ತುತ ಮಂಗಳೂರು–ಬೆಂಗಳೂರು ಮಾರ್ಗದ ವಿಮಾನ ಪ್ರಯಾಣ ದರ ₹18 ಸಾವಿರಕ್ಕೆ ಏರಿದೆ. ಈ ದರ ಸಮಾನ್ಯವಾಗಿ ಸರಾಸರಿ ₹4 ಸಾವಿರಕ್ಕಿಂತ ಹೆಚ್ಚಾಗುವುದಿಲ್ಲ. ಈ ಸಂದರ್ಭದಲ್ಲಿ ಹೆಚ್ಚು ವಿಮಾನಗಳ ಸಂಚಾರಕ್ಕೆ ನಾಗರಿಕ ವಿಮಾನಯಾನ ಸಚಿವ ಜಯಂತ್‌ ಸಿನ್ಹ ಅವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳೂರು ವಿಮಾನನಿಲ್ದಾಣ ಕೇರಳಕ್ಕೆ ಅತ್ಯಂತ ಸಮೀಪವಿದೆ. ಕರಾವಳಿಯನ್ನು ಸಂಪರ್ಕಿಸುವ ಬಹುತೇಕ ರಸ್ತೆಗಳು ಹಾನಿಗೊಳಗಾಗಿವೆ. ರೈಲುಗಳು ಸಂಚರಿಸುತ್ತಿಲ್ಲ. ಆದ್ದರಿಂದ, ಜಯಂತ್‌ ಸಿನ್ಹ ಅವರು ತಕ್ಷಣ ಮಂಗಳೂರು–ಬೆಂಗಳೂರು, ಮಂಗಳೂರು–ಮುಂಬೈ ಸೇರಿದಂತೆ ಇತರ ಎಲ್ಲಾ ವಲಯಗಳ ಮಾರ್ಗಗಳಲ್ಲಿನ ಹೆಚ್ಚಿನ ದರವನ್ನು ಕಡಿತಗೊಳಿಸಿ, ಹೆಚ್ಚು ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಟ್ವಿಟ್‌ ಮಾಡಿದ್ದಾರೆ.

ADVERTISEMENT

ವ್ಯಾಪಕವಾಗಿ ಮಳೆಯಿಂದ ಪ್ರವಾಹ ಎದುರಾಗಿರುವ ಕೇರಳ ವಿಮಾನನಿಲ್ದಾಣವನ್ನು ಆ. 18ರ ವರೆಗೆ ಬಂದ್‌ ಮಾಡಲಾಗಿದೆ. ಇಲ್ಲಿಂದ ವಿಮಾನಗಳ ಸಂಚಾರ ನಡೆಯುತ್ತಿಲ್ಲ. ಇಲ್ಲಿನ ಜನರಿಗೆ ಸಮೀಪದ ವಿಮಾನನಿಲ್ದಾಣವೆಂದರೆ ಮಂಗಳೂರು ವಿಮಾನನಿಲ್ದಾಣ.

ಇದೇ ವೇಳೆ ಕೇರಳದ ಹಾಗೂ ರಾಜ್ಯದ ಪ್ರವಾಹ ಪರಿಸ್ಥಿತಿಯ ಕುರಿತು ಮತ್ತೊಂದು ಟ್ವಿಟ್‌ ಮಾಡಿರುವ ಅವರು, ಜನರು ಪ್ರವಾಹ ಸಂಕಷ್ಟದಲ್ಲಿರುವ ನೆರವಿಗೆ ತಂಡೋಪತಂಡವಾಗಿ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ಕೊಡಗಿನೆಲ್ಲೆಡೆ ವ್ಯಾಪಕ ಮಳೆಯಾಗುತ್ತಿದ್ದು, ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳುವಂತೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ಅವರು ಮತ್ತೊಂದು ಟ್ವಿಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.