ADVERTISEMENT

'ಆಕರ್ಷಣಾ ಕೇಂದ್ರಗಳಾದ ಖಾಸಗಿ ಶಾಲೆಗಳು'

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 16:53 IST
Last Updated 5 ಜುಲೈ 2020, 16:53 IST

ಬೆಂಗಳೂರು: 'ಕಲಿಕಾ ಕೇಂದ್ರಗಳಾಗಬೇಕಿದ್ದ ಖಾಸಗಿ ಶಾಲೆಗಳು, ವ್ಯಾಪಾರೀಕರಣದ ಹಾದಿಯಲ್ಲಿರುವ ಶಿಕ್ಷಣ ಕ್ಷೇತ್ರದಲ್ಲಿ ಆಕರ್ಷಣೆಯ ಕೇಂದ್ರಗಳ ಸ್ವರೂಪ ತಾಳಿವೆ' ಎಂದು ಶಿಕ್ಷಣ ತಜ್ಞ ಪ್ರೊ.ಮಹಾಬಲೇಶ್ವರ ರಾವ್ ಟೀಕಿಸಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‍ಇಸಿ) ಭಾನುವಾರ 'ಸಂಕಷ್ಟದಲ್ಲಿ ಖಾಸಗಿ ಶಾಲಾ ಶಿಕ್ಷಕರು! ಪರಿಹಾರವೇನು?' ಕುರಿತು ಆಯೋಜಿದ್ದ ಫೇಸ್‍ಬುಕ್ ಲೈವ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಗ್ರಾಹಕರನ್ನು ಆಕರ್ಷಿಸಲು ವ್ಯಾಪಾರಿಗಳು ಅಂಗಡಿಗಳನ್ನು ಅಂದಗೊಳಿಸುವಂತೆ ಶಾಲೆಗಳೂ ಇಂದು ಮಕ್ಕಳು, ಪೋಷಕರನ್ನು ಸೆಳೆಯುವ ಆಕರ್ಷಣೀಯ ಕೇಂದ್ರಗಳಾಗಿವೆ. ಶಿಕ್ಷಕರಿಗೆ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಅತಿಥಿ ಶಿಕ್ಷಕರೆಂಬ ಹಣೆಪಟ್ಟಿಗಳಿವೆ. ಖಾಸಗಿ ಶಾಲಾ ಶಿಕ್ಷಕರಿಗೂ ಸರ್ಕಾರದಂತೆ ವೇತನಶ್ರೇಣಿ ನೀಡಬೇಕೆಂಬ ಕಾನೂನುಗಳು ಕಾಗದದಲ್ಲಿದ್ದು, ಹಲ್ಲಿಲ್ಲದ ಹಾವಿನಂತಿವೆ' ಎಂದರು.

ADVERTISEMENT

'ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಮಠಾಧಿಪತಿಗಳು, ರಾಜಕೀಯ ನಾಯಕರು ಹಾಗೂ ಬಂಡವಾಳಶಾಹಿಗಳ ಕೈವಶವಾಗಿವೆ. ಇವರೆಲ್ಲರ ಸಹಯೋಗದಲ್ಲಿ ಖಾಸಗಿ ಶಿಕ್ಷಕರ ಮೇಲೆ ನಿರಂತರವಾಗಿ ಶೋಷಣೆಗಳು ನಡೆಯುತ್ತಲೇ ಇವೆ' ಎಂದರು.

'ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಪ್ರೊ.ಎ.ಅಜಿತ್ ಪ್ರಸಾದ್, ’ಫಲಿತಾಂಶಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ತಯಾರಿಸುವಂತೆ ಖಾಸಗಿ ಶಿಕ್ಷಕರ ಮೇಲೆ ಆಡಳಿತ ಮಂಡಳಿಗಳು ಒತ್ತಡ ಹೇರುತ್ತವೆ. ಶಿಕ್ಷಕರ ವೃತ್ತಿ ಬೆಳವಣಿಗೆಗೂ ಮಂಡಳಿಗಳು ಅಡ್ಡಿಪಡಿಸಿವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.