ADVERTISEMENT

ವಿದೇಶಿ ನೇರ ಹೂಡಿಕೆಗೆ ಉತ್ತೇಜನ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 19:12 IST
Last Updated 26 ಆಗಸ್ಟ್ 2020, 19:12 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ರಾಜ್ಯದಲ್ಲಿ ಹೆಚ್ಚಿನ ಆರ್ಥಿಕ ಪ್ರಗತಿಯನ್ನು ಸಾಧಿಸಲು ವಿದೇಶಿ ನೇರ ಹೂಡಿಕೆ ಉತ್ತೇಜನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಇಂಡಿಯನ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ ಬುಧವಾರ ಆಯೋಜಿಸಿದ್ದ ‘ಇಂಡೊ– ಜಪಾನಿಸ್ ಬಿಜಿನೆಸ್‌ ಫೋರಂ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಪಾನ್‌ ಕಂಪನಿಗಳಿಂದ ನೇರ ಹೂಡಿಕೆಗೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು ಎಂದು ಹೇಳಿದ ಯಡಿಯೂರಪ್ಪ, ಇತರ ರಾಜ್ಯಗಳಿಗಿಂತ ಹೂಡಿಕೆಗೆ ಕರ್ನಾಟಕ ರಾಜ್ಯ ಹೇಗೆ ಸೂಕ್ತ ಎಂಬುದನ್ನು ಜಪಾನ್‌ ನಿಯೋಗಕ್ಕೆ ಅವರು ವಿವರಿಸಿದರು.

ADVERTISEMENT

ತುಮಕೂರಿನ ವಸಂತನರಸಾಪುರದಲ್ಲಿ 519.55 ಎಕರೆ ಪ್ರದೇಶದಲ್ಲಿ ಜಪಾನಿ ಕೈಗಾರಿಕೆಗಳಿಗೆಂದೇ ಟೌನ್‌ಶಿಪ್‌ ಸ್ಥಾಪಿಸಲಾಗಿದೆ. ರಸ್ತೆ, ವಿದ್ಯುತ್‌ ಮತ್ತು ನೀರು ಸೇರಿ ಎಲ್ಲ ರೀತಿಯ ಮೂಲಸೌಕರ್ಯವನ್ನು ಕಲ್ಪಿಸಲಾಗಿದೆ. ಈ ಟೌನ್‌ಶಿಪ್‌ನಲ್ಲಿ ಹೆವಿ ಎಂಜಿನಿಯರಿಂಗ್‌, ಯಂತ್ರೋಪಕರಣ, ಆಟೋಮೋಟಿವ್‌ ಮತ್ತು ಏರೋಸ್ಪೇಸ್‌ ಘಟಕಗಳಿಗೆ ಆದ್ಯತೆ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಇತ್ತೀಚೆಗೆ ವಿದೇಶಿ ಉದ್ಯಮಿಗಳೂ ವಿವಿಧೆಡೆ ಬಂಡವಾಳ ಹೂಡುವ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. 2020 ರ ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ವಿದೇಶ ನೇರ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.