ಹುಬ್ಬಳ್ಳಿ: ಕೇಂದ್ರ ಸರ್ಕಾರವು ರೈಲ್ವೆ ಖಾಸಗೀಕರಣವನ್ನು ಕೈಬಿಡದೇ ಇದ್ದರೇ ದೇಶದಾದ್ಯಂತ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಅಖಿಲ ಭಾರತ ರೈಲ್ವೆ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ ಮಿಶ್ರಾ ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 4ರಿಂದ 6ರವರೆಗೆ ಚೆನ್ನೈನಲ್ಲಿ ನಡೆಯಲಿರುವ ಅಖಿಲ ಭಾರತ ರೈಲ್ವೆ ಕಾರ್ಮಿಕರ ಒಕ್ಕೂಟದ 95ನೇ ಸಮಾವೇಶದಲ್ಲಿ, ಮುಷ್ಕರ ಹಮ್ಮಿಕೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದರು.
150 ರೈಲುಗಳು ಮತ್ತು 50 ರೈಲ್ವೆ ನಿಲ್ದಾಣಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ತನಿಕೆಗೆ ಆಗ್ರಹ: ‘ದೆಹಲಿ– ಲಕ್ನೋ ನಡುವೆ ಸಂಚರಿಸುತ್ತಿರುವ ‘ತೇಜಸ್ ಎಕ್ಸ್ಪ್ರೆಸ್’ ಖಾಸಗಿ ರೈಲು ಶೇ 60ರಷ್ಟು ಖಾಲಿ ಓಡುತ್ತಿದೆ. ಆದರೆ, ಲಾಭದಲ್ಲಿ ಓಡುತ್ತಿದೆ ಎಂಬುದನ್ನು ನಂಬಲು ಸಾಧ್ಯ ಇಲ್ಲ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.
‘55 ವರ್ಷ ವಯಸ್ಸಾದ ಅಥವಾ 33 ವರ್ಷಗಳ ಸೇವಾವಧಿ ಪೂರೈಸಿದ ಕಾರ್ಮಿಕರು ಕಡ್ಡಾಯ ನಿವೃತ್ತಿ ಹೊಂದಬೇಕೆಂಬ ಆದೇಶವನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
ಸಮಾವೇಶ: ಸೌಥ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ನ ನಾಲ್ಕನೇ ತ್ರೈವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ್ಕುಮಾರ್ ಸಿಂಗ್, ‘ರೈಲ್ವೆ ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದು, ಇದರ ಅನುಷ್ಠಾನಕ್ಕೆ ಪ್ರತಿಯೊಬ್ಬ ಕಾರ್ಮಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.
ನೈರುತ್ಯ ರೈಲ್ವೆ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಲಯದ ಸಾವಿರಾರು ಕಾರ್ಮಿಕರು ಜಾಥಾದಲ್ಲಿ ಭಾಗವಹಿಸಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.