ADVERTISEMENT

ಒಳಮೀಸಲು ಶಿಫಾರಸಿಗೆ ಆಕ್ರೋಶ: ಮುಂದುವರಿದ ಪ್ರತಿಭಟನೆ

ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳಿಂದ ಮುಂದುವರಿದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 18:58 IST
Last Updated 29 ಮಾರ್ಚ್ 2023, 18:58 IST
ಸೊರಬದ ಬಸ್ ನಿಲ್ದಾಣದ ಎದುರು ಬುಧವಾರ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯದವರು ಪ್ರತಿಭಟಿಸಿದರು‌
ಸೊರಬದ ಬಸ್ ನಿಲ್ದಾಣದ ಎದುರು ಬುಧವಾರ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯದವರು ಪ್ರತಿಭಟಿಸಿದರು‌   

ಶಿವಮೊಗ್ಗ: ಒಳಮೀಸಲಾತಿ ವರ್ಗೀ ಕರಣ ಕುರಿತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡದೇ ರದ್ದುಪಡಿಸುವಂತೆ ಒತ್ತಾಯಿಸಿ ಬಂಜಾರ, ಭೋವಿ, ಕೊರಮ, ಕೊರಚ ಸಮುದಾ ಯದವರು ಜಿಲ್ಲೆಯ ಸೊರಬ ಪಟ್ಟಣ ದಲ್ಲಿ ಬುಧವಾರ ಪ್ರತಿಭಟಿಸಿದರು.

ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಕೃತಿ ದಹಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ ಎಂದು ಪೊಲೀಸರು ಹೇಳಿದಾಗ ಪ್ರತಿಭಟನಕಾರರು ಅಲ್ಲಿಂದ ತೆರಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಬೆಳಿಗ್ಗೆ ಯಿಂ ದಲೇ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ADVERTISEMENT

ಗಾಡಿಕೊಪ್ಪದಲ್ಲೂ ಬಂಜಾರ ಸಮುದಾಯದವರು ಒಳಮೀಸಲಾತಿ ವರ್ಗೀಕರಣದ ವರದಿ ಶಿಫಾರಸನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

ದಾವಣಗೆರೆ ವರದಿ: ಒಳಮೀಸಲಾತಿ ವರ್ಗೀಕರಣ ಕುರಿತ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಸರ್ಕಾರದ ನಿರ್ಧಾರ ಖಂಡಿಸಿ ಜಿಲ್ಲೆಯ ಹೊನ್ನಾಳಿಯಲ್ಲಿ ತಾಲ್ಲೂಕು ಬಂಜಾರ ಸಮುದಾಯದಿಂದ ಪ್ರತಿಭಟಿಸ ಲಾಯಿತು. ‘ಕೂಡಲೇ ಶಿಫಾರಸನ್ನು ತಡೆ ಹಿಡಿಯಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಸಮಾಜದ ಅಧ್ಯಕ್ಷ ಅಂಜುನಾಯ್ಕ ಎಚ್ಚರಿಸಿದರು.

ರಸ್ತೆ ತಡೆ ಮಾಡಿ ಪ್ರತಿಭಟನೆ (ಬಸವನಬಾಗೇವಾಡಿ): ಸದಾಶಿವ ಆಯೋಗದ ವರದಿ ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿರುವುದನ್ನು ಖಂಡಿಸಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಬಂಜಾರ, ಬೋವಿ ಸೇರಿದಂತೆ ವಿವಿಧ ಸಮುದಾಯದವರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಇಲ್ಲಿಯ ಡಾ.ಬಿ. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನೆ ಆರಂಭಿಸಿ ಬಸವೇಶ್ವರ ವೃತ್ತಕ್ಕೆ ಬಂದ ಕೆಲ ಕಾಲ ರಸ್ತೆ ತಡೆ ನಡೆಸಿದರು. ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಒಳಮೀಸಲಾತಿ ರದ್ದುಪಡಿಸಿ, ಇಲ್ಲವೇ ವಿಷ ಕೊಡಿ’

ಬಾಗಲಕೋಟೆ: ‘ಒಳ ಮೀಸಲಾತಿ ‌ರದ್ದುಪಡಿಸಿ, ಇಲ್ಲವೇ‌ ವಿಷ ಕೊಡಿ' ಎಂದು ಬಂಜಾರ‌‌ ಸಮಾಜದ ಮುಖಂಡ ರಾಜು ಲಮಾಣಿ ಬುಧವಾರ ಆಗ್ರಹಿಸಿದರು.

ಬಾಗಲಕೋಟೆಯಲ್ಲಿ ಪ್ರತಿಭಟನೆ ಮಾಡಿದ ಬಂಜಾರ ಸಮಾಜದ ಮುಖಂಡರು, ಬಿಜೆಪಿ ಸರ್ಕಾರದ ‌ವಿರುದ್ಧ ಘೋಷಣೆಗಳನ್ನು ಕೂಗಿದರು. ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಬಂಜಾರ‌‌ ಸೇವಾ‌ ಸಂಘದ‌ ಜಿಲ್ಲಾ ಘಟಕದ ಅಧ್ಯಕ್ಷ ಬಲರಾಮ ನಾಯ್ಕ ಅವರು, 'ಹಿಂದಿನ ಸರ್ಕಾರ ‌ನಮಗೆ ಊಟ ಹಾಕಿತ್ತು. ‌ಅದನ್ನು ಇವರು ಬೂಟುಗಾಲಲೇ ಒದ್ದಿದ್ದಾರೆ, ಇವರನ್ನು ಜಾಡಿಸಿ, ಜಾಡಿಸಿ
ಒದೆಯಲು ನಾವೂ ಸಿದ್ಧರಿದ್ದೇವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಶೇ 100ರಷ್ಟು ಮುಖ್ಯಮಂತ್ರಿ ಆಗುವುದಿಲ್ಲ. ಅವರು ಮುಖ್ಯಮಂತ್ರಿಯಾದರೆ ನೇಣು ಹಾಕಿಕೊಳ್ಳುತ್ತೇನೆ’ ಎಂದು ಎಚ್ಚರಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ, ಹೂವಪ್ಪ ರಾಠೋಡ, ಲಿಂಗಪ್ಪ ಚವ್ಹಾಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ರಸ್ತೆ ತಡೆ ಮಾಡಿ ಪ್ರತಿಭಟನೆ

ಬಸವನಬಾಗೇವಾಡಿ: ಸದಾಶಿವ ಆಯೋಗದ ವರದಿ ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿರುವುದನ್ನು ಖಂಡಿಸಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಬಂಜಾರ, ಬೋವಿ ಸೇರಿದಂತೆ ವಿವಿಧ ಸಮುದಾಯದವರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಇಲ್ಲಿಯ ಡಾ.ಬಿ. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನೆ ಆರಂಭಿಸಿ ಬಸವೇಶ್ವರ ವೃತ್ತಕ್ಕೆ ಬಂದ ಕೆಲ ಕಾಲ ರಸ್ತೆ ತಡೆ ನಡೆಸಿದರು. ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಲಕ್ಷ್ಮೇಶ್ವರ (ಗದಗ ಜಿಲ್ಲೆ): ‘ಸರ್ಕಾರದ ಒಳಮೀಸಲಾತಿ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಸರ್ಕಾರ ಈ ವರದಿಯನ್ನು ಜಾರಿ ಮಾಡಕೂಡದು’ ಎಂದು ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರದ ಬಂಜಾರ ಸಮಾಜದವರು ಬುಧವಾರ ಆಗ್ರಹಿಸಿದರು. ಶಿಫಾರಸು ಹಿಂಪಡೆಯದಿದ್ದರೆ ವಿಧಾನಸಭಾ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದರು.

ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಮಾಜದ ಮುಖಂಡ ಶಿವಣ್ಣ ಲಮಾಣಿ, ‘ಒಳಮೀಸಲಾತಿ ವರದಿ ಅವೈಜ್ಞಾನಿಕ. ಒಳಮೀಸಲಾತಿ ಜಾರಿ ನಿರ್ಧಾರ ವನ್ನು ತಕ್ಷಣ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಅಶೋಕ ಲಮಾಣಿ, ‘ಒಳ ಮೀಸಲಾತಿ ಶಿಫಾರಸು ಹಿಂಪಡೆಯಬೇಕು. ತಾಲ್ಲೂಕಿನ ಎಲ್ಲಾ ತಾಂಡಾದಲ್ಲಿ ವಿಧಾನಸಭಾ ಚುನಾವಣೆ ಬಹಿಷ್ಕರಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.