ಬೆಂಗಳೂರು: ‘ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಬಳಿ ಸಂಭವಿಸಿದ ಕಾರು ಅಪಘಾತಕ್ಕೂ ನನ್ನ ಪುತ್ರನಿಗೂ ಯಾವುದೇ ಸಂಬಂಧವಿಲ್ಲ’ ಎಂದು ಕಂದಾಯ ಸಚಿವ ಆರ್.ಅಶೋಕ ಗುರುವಾರ ಸ್ಪಷ್ಟಪಡಿಸಿದ್ದಾರೆ.
‘ನನ್ನ ಮಗನಿಗೆ ಸಂಬಂಧ ಇಲ್ಲ ಎಂದ ಮೇಲೆ ಸ್ಪಷ್ಟನೆ ನೀಡುವ ಅಗತ್ಯವೇ ಇಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸಚಿವರು ತಮ್ಮ ಪ್ರಭಾವ ಬಳಸಿ ಅಪಘಾತ ಮಾಡಿದ ಪುತ್ರ ಶರತ್ ಅವರನ್ನು ರಕ್ಷಿಸುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾರು ನೋಂದಣಿಯಾಗಿರುವ ಸಂಸ್ಥೆಗೂ, ನಮಗೂ ಸಂಬಂಧವಿಲ್ಲ ಎಂದರು. ಆದರೆ ಕಾರು ಅಪಘಾತದ ಸಮಯದಲ್ಲಿ ತಮ್ಮ ಮಗ ಎಲ್ಲಿದ್ದರು ಎಂಬ ಬಗ್ಗೆ ವಿವರಣೆ ನೀಡಲು ನಿರಾಕರಿಸಿದರು.
ಇದನ್ನೂ ಓದಿ...ಅಪಘಾತದಲ್ಲಿ ಇಬ್ಬರ ಸಾವು: ಪೊಲೀಸರಿಂದ ಸಚಿವನ ಮಗನ ರಕ್ಷಣೆ?
‘ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ. ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಕರಣ ತನಿಖೆ ಹಂತದಲ್ಲಿದ್ದು, ಈ ಸಮಯದಲ್ಲಿ ನಾನು ಪ್ರತಿಕ್ರಿಯಿಸುವುದು ಸರಿಯಲ್ಲ. ತಪ್ಪು ಮಾಡಿದವರಿಗೆ ಕಾನೂನು ಪಾಠ ಕಲಿಸುತ್ತದೆ. ತನಿಖೆ ನಡೆದು ಸತ್ಯ ಹೊರ ಬರಲಿದ್ದು, ಕಾನೂನಿನ ಮುಂದೆ ಎಲ್ಲರೂ ಸಮಾನರು. ಈ ವಿಚಾರದಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.