ಬೆಂಗಳೂರು: ‘ಸಂವಿಧಾನದ ಪ್ರಕಾರವೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕು. ಜಾತಿಗೊಬ್ಬ ಮುಖ್ಯಮಂತ್ರಿಯನ್ನು ಆಯ್ಕೆಮಾಡಲು ಸಾಧ್ಯವಿಲ್ಲ. ಒಕ್ಕಲಿಗರ ವಿಚಾರದಲ್ಲಿ ಯಾರೂ ಲಕ್ಷ್ಮಣ ರೇಖೆಯನ್ನು ದಾಟುವುದು ಬೇಡ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಗಾಗಿ ಜಾತಿ ಮುಂದಿಡುತ್ತಿದ್ದಾರೆ. ಸಿದ್ದರಾಮಯ್ಯ, ಖರ್ಗೆ, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ ಒಂದೊಂದು ಜಾತಿ ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ. ಒಕ್ಕಲಿಗರ ಜಾತಿ ಬಗ್ಗೆ ಮಾತನಾಡುತ್ತಿದ್ದಾರೆ. ನಾನೂ ಒಕ್ಕಲಿಗ. ನಮ್ಮ ಜಾತಿಗೆ ಬೆಲೆ ಇಲ್ಲವೆ? ಕೆಂಪೇಗೌಡ,
ಕುವೆಂಪು ಎಂದಾದರೂ ಜಾತಿ ಆಧಾರದಲ್ಲಿ ಕೆಲಸ ಮಾಡಿದ್ದರೆ’ ಎಂದು ಪ್ರಶ್ನಿಸಿದರು.
‘ಲಿಂಗಾಯತ, ಗೌಡ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಂದು ಜಾತಿ ಹೆಸರಿನಲ್ಲಿ ಮಾತನಾಡುವುದು ಬೇಡ. ಜನರು ಯಾರನ್ನು ಇಷ್ಟಪಡುತ್ತಾರೋ ಅವರು ಮುಖ್ಯಮಂತ್ರಿ ಆಗುತ್ತಾರೆ ’ ಎಂದರು. ‘ಕಾಂಗ್ರೆಸ್ನ ಒಳಗಿನ ಜಗಳ ಈಗ ಬೀದಿ ರಂಪ ಆಗಿದೆ. ಮನೆಯೊಳಗೆ ತೀರ್ಮಾನ ಆಗಬೇಕಾದ ವಿಚಾರಗಳು ಬೀದಿಗೆ ಬಂದಿವೆ. ಡಿ.ಕೆ. ಶಿವಕುಮಾರ್ ಪರ ಅವರೇ ಬ್ಯಾಟ್ ಬೀಸುತ್ತಿದ್ದಾರೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.