ADVERTISEMENT

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಭವ್ಯ ಭವಿಷ್ಯದ ಸೂಚಕ: ರಾಘವೇಶ್ವರ ಭಾರತೀ ಸ್ವಾಮೀಜಿ

ಗೋಕರ್ಣದಲ್ಲಿ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 13:44 IST
Last Updated 2 ಸೆಪ್ಟೆಂಬರ್ 2020, 13:44 IST
ಗೋಕರ್ಣದ ಅಶೋಕವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಅವರಿಗೆ ‘ಚಾತುರ್ಮಾಸ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು
ಗೋಕರ್ಣದ ಅಶೋಕವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಅವರಿಗೆ ‘ಚಾತುರ್ಮಾಸ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು   

ಕಾರವಾರ: ‘ಭವ್ಯ ಭವಿಷ್ಯದ ಸೂಚಕ, ದೇಶದ ದಿಶೆಯನ್ನೇ ಬದಲಾಯಿಸಬಲ್ಲ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಯ ಸಂಕಲ್ಪವು ವಿದ್ಯಾ ಚಾತುರ್ಮಾಸ್ಯ ಸಂದರ್ಭದಲ್ಲಿ ಸಾಕಾರಗೊಂಡಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

ಗೋಕರ್ಣದ ಅಶೋಕವನದ ಆವರಣದಲ್ಲಿ ಬುಧವಾರ ನಡೆದ 27ನೇ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ತಕ್ಷಶಿಲೆಯ ಪುನರ್ ಸೃಷ್ಟಿ ಇದಾಗಲಿದೆ. ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲ ವ್ಯಕ್ತಿತ್ವಗಳು ಇಲ್ಲಿ ರೂಪುಗೊಳ್ಳಲಿವೆ. ಗೋಕರ್ಣದ ಮಣ್ಣಿನ ಮಹಿಮೆ ಅಪಾರ. ಈ ಕ್ಷೇತ್ರದಲ್ಲಿ ಕೈಗೊಂಡ ಚಾತುರ್ಮಾಸ್ಯಕ್ಕೆ ವಿಶೇಷ ಮಹತ್ವವಿದೆ. ಇಂಥ ಪುಣ್ಯಭೂಮಿಯಲ್ಲಿ ವಿಶ್ವವಿದ್ಯಾಪೀಠ ಉಗಮವಾಗುತ್ತಿದೆ’ ಎಂದು ಬಣ್ಣಿಸಿದರು.

ADVERTISEMENT

ಪರಿಸರ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ, ಪ್ರಸ್ತುತ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಕೆ.ಎಸ್.ಗುರುಮೂರ್ತಿ ಅವರಿಗೆ ಮಠದಿಂದ ‘ಚಾತುರ್ಮಾಸ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರಮುಖರಾದ ಅಪರ್ಣಾ ಗುರುಮೂರ್ತಿ, ಗಂವ್ಹಾರ ಮಠದ ಪಾಂಡುರಂಗ ಮಹಾರಾಜ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಇದ್ದರು.

ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ ದಂಪತಿ ಸಭಾಪೂಜೆ ನೆರವೇರಿಸಿದರು. ವಿದ್ವಾನ್ ಜಗದೀಶ್ ಶರ್ಮಾ ಸಂಪ ಅಭಿನಂದನಾ ಭಾಷಣ ಮಾಡಿದರು. ಚಾತುರ್ಮಾಸ್ಯ ಸಮಿತಿ ಕೋಶಾಧ್ಯಕ್ಷ ಸುಬ್ರಾಯ ಭಟ್ ಮೂರೂರು ಲೆಕ್ಕಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್ ಅವಲೋಕನ ನೆರವೇರಿಸಿದರು. ಅರುಣ್ ಹೆಗಡೆ ಅಭಿನಂದನಾ ಪತ್ರ ಓದಿದರು. ಗಣೇಶ್ ಜೋಶಿ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಸ್ವಾಮೀಜಿ ಗಂಗಾವಳಿ ನದಿಯನ್ನು ದಾಟುವ ಮೂಲಕ ಸೀಮೋಲ್ಲಂಘನೆ ಕೈಗೊಂಡರು. ಮಲ್ಲಿಕಾರ್ಜುನ ದೇವಾಲಯದಲ್ಲಿ ನಡೆದ ಚಂಡಿಕಾ ಹವನದ ಪೂರ್ಣಾಹುತಿಯಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.