ADVERTISEMENT

ರಾಯಚೂರು ಕೃಷಿ ವಿವಿ ಘಟಿಕೋತ್ಸವ: ಪೋಸ್ಟ್‌ಮ್ಯಾನ್‌ ಪುತ್ರಿಗೆ 5 ಚಿನ್ನದ ಪದಕ

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಇಂದು ಪ್ರದಾನ

ನಾಗರಾಜ ಚಿನಗುಂಡಿ
Published 26 ಫೆಬ್ರುವರಿ 2019, 19:42 IST
Last Updated 26 ಫೆಬ್ರುವರಿ 2019, 19:42 IST
ತಂದೆ ಶೇಖ್‌ ಹುಸೇನ್‌ ಅವರೊಂದಿಗೆ ಶೌರಥುನ್ನೀಸಾ ಬೇಗಂ
ತಂದೆ ಶೇಖ್‌ ಹುಸೇನ್‌ ಅವರೊಂದಿಗೆ ಶೌರಥುನ್ನೀಸಾ ಬೇಗಂ   

ರಾಯಚೂರು: ತಾಲ್ಲೂಕು ಮರ್ಚೇಡ್‌ ಗ್ರಾಮದ ಪೋಸ್ಟ್‌ಮ್ಯಾನ್‌ ಶೇಖ್‌ ಹುಸೇನ್‌ ಅವರ ಪುತ್ರಿ ಶೌರಥುನ್ನೀಸಾ ಬೇಗಂ ಅವರು ಕೃಷಿ ತಾಂತ್ರಿಕ ಪದವಿಯಲ್ಲಿ ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಫೆ.27 (ಬುಧವಾರ) ನಡೆಯುವ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪದಕಗಳು ಹಾಗೂ ಎರಡು ನಗದು ಬಹುಮಾನಗಳನ್ನು ಪ್ರದಾನ ಮಾಡಲಾಗುವುದು.

ಶೌರಥುನ್ನೀಸಾ ಬೇಗಂ 2016–17ನೇ ಸಾಲಿನ ಕೃಷಿ ತಾಂತ್ರಿಕ ಪದವಿಯಲ್ಲಿ ವಿಶ್ವವಿದ್ಯಾಲಯ ಮಟ್ಟಕ್ಕೆ ಶೇಕಡ 89.4 ರಷ್ಟು ಅಂಕಗಳನ್ನು ಪಡೆದು ಅತಿಹೆಚ್ಚಿನ ಪದಕಗಳಿಗೆ ಭಾಜನರಾಗಿದ್ದಾರೆ. ಪದವಿಯ ಬಳಿಕ ಆಹಾರ ಸಂಸ್ಕರಣೆ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ (ಎಂ.ಟೆಕ್‌)ಕ್ಕೆ ಪ್ರವೇಶ ಪಡೆದಿದ್ದು, ಪಿ.ಎಚ್‌ಡಿ ಮಾಡಿಕೊಂಡು ಪ್ರಾಧ್ಯಾಪಕಿ ಆಗುವ ಗುರಿ ಹೊಂದಿದ್ದಾರೆ.

ADVERTISEMENT

ಇವರು ಪ್ರೌಢಶಾಲೆ ವರೆಗೂ ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ರಾಯಚೂರಿನ ಸೇಂಟ್‌ ಮೇರಿಸ್‌ ಶಾಲೆಯಲ್ಲಿ ಪಿಯುಸಿ ವಿಜ್ಞಾನ ಪೂರ್ಣಗೊಳಿಸಿದ್ದಾರೆ.

‘ಮಗಳು ಮೊದಲಿನಿಂದಲೂ ಓದುವುದರ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಳು. ಚಿನ್ನದ ಪದಕಗಳ ಸಾಧನೆ ಮಾಡಿರುವುದನ್ನು ನೋಡಿ ಖುಷಿಯಾಗಿದೆ’ ಎಂದು ತಂದೆ ಶೇಖ್‌ ಹುಸೇನ್‌ ಹೇಳಿದರು.

‘ಪದವಿಯಲ್ಲಿ ಗರಿಷ್ಠ ಅಂಕ ಪಡೆಯಲು ತಂದೆ ಶೇಖ್‌ ಹುಸೇನ್‌–ತಾಯಿ ಫಾತಿಮಾ ಅವರ ಬೆಂಬಲವೇ ಕಾರಣ. ಈ ಗೌರವ ಮತ್ತು
ಚಿನ್ನದ ಪದಕಗಳನ್ನು ಅವರಿಗೇ ಸಮರ್ಪಿಸುತ್ತೇನೆ’ ಎನ್ನುತ್ತಾರೆ ಶೌರಥುನ್ನೀಸಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.