ADVERTISEMENT

ರಾಜ್ಯದ ಹಲವು ಕಡೆ ಮುಳುಗಿದ ಸೇತುವೆಗಳು: ಗ್ರಾಮಗಳ ಸಂಪರ್ಕ ಕಡಿತ

ಮಲಪ್ರಭಾ ನದಿ ನೀರಿನಲ್ಲಿ ಕೊಚ್ಚಿ ಹೋದ ರೈತ l ಬಳ್ಳಾರಿ ಜಿಲ್ಲೆಯಲ್ಲಿ ಗೋಡೆ ಕುಸಿದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 18:59 IST
Last Updated 7 ಸೆಪ್ಟೆಂಬರ್ 2022, 18:59 IST
ಹೊಸದುರ್ಗದ ಪೂಜಾರಹಟ್ಟಿಯಲ್ಲಿ ಮನೆಯೊಂದು ಮುಳುಗಡೆಯಾಗಿರುವುದು
ಹೊಸದುರ್ಗದ ಪೂಜಾರಹಟ್ಟಿಯಲ್ಲಿ ಮನೆಯೊಂದು ಮುಳುಗಡೆಯಾಗಿರುವುದು   

ಹುಬ್ಬಳ್ಳಿ/ಚಿತ್ರದುರ್ಗ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬುಧವಾರವೂ ಗುಡುಗು–ಸಿಡಿಲು ಸಹಿತ ಧಾರಾಕಾರ ಮಳೆಯಾಗಿರುವುದರಿಂದ ನದಿ, ಹಳ್ಳ–ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಸೇತುವೆ ಹಾಗೂ ರಸ್ತೆಗಳು ಮುಳುಗಡೆಯಾಗಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮನೆಗಳಿಗೂ ಹಾನಿಯಾಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಗಂಜಿಹಾಳದ ರೈತ ದೇವಾನಂದ ಕಮ್ಮಾರ (20) ಎಂಬುವರು ಮಲಪ್ರಭಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರಿನಲ್ಲಿ ಮನೆ ಗೋಡೆ ಕುಸಿದು ಬಿದ್ದು ಆಶಾ ಕಾರ್ಯಕರ್ತೆ ಬಿ.ಉಮಾದೇವಿ ಬಳಗಾನೂರು ಜಡೆಪ್ಪ (44) ಮೃತಪಟ್ಟಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಮಳೆಯಾಗಿರುವುದರಿಂದ ಮಲಪ್ರಭಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ದಡದ ಹೊಲದಲ್ಲಿದ್ದ ಪಂಪ್ ಸೆಟ್ ಬಿಚ್ಚಿಕೊಂಡು ಬರಲು ಹೋಗಿದ್ದ ದೇವಾನಂದ ಅವರು ನೀರಿನ ಸೆಳೆವಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ADVERTISEMENT

ಹುನಗುಂದ ತಾಲ್ಲೂಕಿನ ಕೆಂಗಲ್, ಕಜಗಲ್, ಹೂವನೂರು,ವರಗೊಡ ದಿನ್ನಿ, ಗಂಜಿಹಾಳ ಗ್ರಾಮಗಳಿಗೆ ಮಲಪ್ರಭಾ ನದಿ ನೀರು ನುಗ್ಗಿದ್ದು, ಅಲ್ಲಿಯ ನಿವಾಸಿಗಳು ಸಾಮಾನು–ಸರಂಜಾಮುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಆರು ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 161 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಹುನಗುಂದದ ಸಾರ್ವಜನಿಕ ಆಸ್ಪತ್ರೆಗೆ ಮಳೆ ನೀರು ನುಗ್ಗಿ ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆಯ ಬಹುತೇಕ ಕೊಠಡಿಗಳಲ್ಲಿ ನೀರು ನಿಂತಿದೆ. ಪುರಸಭೆ ಎದುರಿನ ಸರ್ಕಾರಿ ಕೇಂದ್ರ ಶಾಲೆಯ ಆವರಣದ ಸುತ್ತಲೂ ಮೊಣಕಾಲೆತ್ತರ ನೀರು ಸಂಗ್ರಹವಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಿಸಲಾಗಿದೆ.

ಮಲಪ್ರಭಾ ನದಿ ಪ್ರವಾಹದಿಂದಾಗಿಬಾದಾಮಿ ತಾಲ್ಲೂಕಿನ ಹೊಳೆಆಲೂರ-ಬಾದಾಮಿ, ಗದಗ-ಬಾಗಲಕೋಟೆ, ಶಿವಯೋಗಮಂದಿರ-ಮಂಗಳೂರು ರಸ್ತೆಗಳಲ್ಲಿನ ಸೇತುವೆ ಮುಳುಗಿ ಸಂಚಾರ ಸ್ಥಗಿತಗೊಂಡಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ವಾಣಿವಿಲಾಸ ಸಾಗರ ಜಲಾಶಯದ ಒಳಹರಿವು ಹೆಚ್ಚಾಗಿದೆ.

ಹೊಸದುರ್ಗ ತಾಲ್ಲೂಕಿನ 20ಕ್ಕೂ ಹೆಚ್ಚು ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿದೆ. ಮೆಣಸಿನಡು ಬಳಿ ತೆಪ್ಪದ ವ್ಯವಸ್ಥೆ ಮಾಡಲಾಗಿದ್ದು, ಜನರು 1 ಕಿ.ಮೀವರೆಗೂ ತೆಪ್ಪದಲ್ಲಿ ಸಾಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಗೊರ್ಲತ್ತು, ವಿಶ್ವೇಶಪುರ ಸೇರಿ ವಿವಿಧ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಮೊಳಕಾಲ್ಮುರು ತಾಲ್ಲೂಕಿಗೆ ಹೊಂದಿಕೊಂಡಿರುವ ಸೀಮಾಂಧ್ರದ ರಾಯದುರ್ಗ ತಾಲ್ಲೂಕಿನ ಬೋರನತಿಪ್ಪೆ ಜಲಾಶಯ (ಬಿಟಿಪಿ ಡ್ಯಾಂ) ಭರ್ತಿಯಾಗಿದ್ದು, ಎಲ್ಲಾ ಗೇಟ್‌ಗಳ ಮೂಲಕ ನೀರು ಹೊರಬಿಡಲಾಗಿದೆ.

ಮಂಗಳೂರು ವರದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಾಧಾರಣ ಮಳೆ ಸುರಿದಿದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಅರಬಲ ಗ್ರಾಮದಲ್ಲಿ 13, ತಿಮ್ಮಾಪುರದಲ್ಲಿ 9, ಜಾವೂರು ಹೊಸಹಳ್ಳಿಯಲ್ಲಿ ಮೂರು ಮನೆಗಳು ಹಾನಿಗೀಡಾಗಿವೆ. ಕಳಸ ಸನಿಹದ ಕೆ.ಎಂ.ರಸ್ತೆ ಬಳಿಯ ಬೇಡಕ್ಕಿ ಹಳ್ಳ ತುಂಬಿ ಹರಿಯುತ್ತಿದ್ದು, ಗದ್ದೆಗಳಿಗೆ ನೀರು ನುಗ್ಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಬಳಿಯ ಹವ್ವಳ್ಳಿ– ಹುಲಿಹಳ್ಳ ಸಂಪರ್ಕ ರಸ್ತೆ ಕುಸಿದಿದೆ.

ವಿಜಯಪುರ ವರದಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನವರೆಗೂ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ.

ಡೋಣಿ ನದಿ ಪ್ರವಾಹ ಪರಿಸ್ಥಿತಿ ಯಥಾಸ್ಥಿತಿಯಲ್ಲಿದೆ. ತಾಳಿಕೋಟೆ–ವಿಜಯಪುರ, ತಾಳಿಕೋಟೆ ಹಡಗಿನಾಳ ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರ ಸ್ಥಗಿತವಾಗಿದೆ. ಬೆಳೆಗಳೂ ಜಲಾವೃತವಾಗಿವೆ.

ಭತ್ತ ಜಲಾವೃತ: ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಬಿದ್ದ ಮಳೆಗೆ ಮುತ್ತಿಗೆ ಗ್ರಾಮದ ದೊಡ್ಡಕೆರೆ ತುಂಬಿ ಹರಿದು ಕೆಳಹಂತದ ಜಮೀನುಗಳಿಗೆ ನೀರು ನುಗ್ಗಿದ್ದು, ಭತ್ತದ ಬೆಳೆಗೆ ಹಾನಿಯಾಗಿದೆ. ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ.

7 ಸಾವಿರ ಹೆಕ್ಟೇರ್‌ ಬೆಳೆ ನಾಶ: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಮೇಡ್ಲೇರಿ ಕೆರೆ ತುಂಬಿ ಕೋಡಿ ಬಿದ್ದು ಬುಧವಾರ ಸಂಜೆವರೆಗೂ ಹರಿಯಿತು. ಇದರಿಂದ ಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ 7 ಸಾವಿರ ಹೆಕ್ಟೇರ್‌ ಬೆಳೆ ನಾಶವಾಗಿದೆ. ಮೆಕ್ಕೆಜೋಳ, ಭತ್ತ, ಹತ್ತಿ, ಈರುಳ್ಳಿ ಬೆಳೆಗಳು ಜಲಾವೃತಗೊಂಡಿವೆ.

ಮನೆಗಳಿಗೂ ಹಾನಿ

ವಿಜಯನಗರ/ಬಳ್ಳಾರಿ: ಅವಳಿ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಡಿ ಭಾರಿ ಮಳೆಯಾಗಿದೆ. ವಿಜಯನಗರ ಜಿಲ್ಲೆಯಲ್ಲಿ 132, ಬಳ್ಳಾರಿ ಜಿಲ್ಲೆಯಲ್ಲಿ 34 ಮನೆಗಳಿಗೆ ಹಾನಿಯಾಗಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿಯಲ್ಲಿ ಮೈಲಾರ–ತೋರಣಗಲ್ಲು ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.

ಹೊಸಪೇಟೆ ತಾಲ್ಲೂಕಿನ ಹಂಪಿ ಕೃಷ್ಣ ದೇವಸ್ಥಾನ ಬಜಾರಿನ ಕಟ್ಟೆ ಕುಸಿದಿದೆ.

80 ಹಳ್ಳಿಗಳಲ್ಲಿ ತೀವ್ರ ನಿಗಾ ಪ್ರದೇಶ: ಧಾರವಾಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಆತಂಕ ದೂರವಾಗಿಲ್ಲ. ಬೆಣ್ಣಿಹಳ್ಳ ಹಾಗೂ ತುಪ್ಪರಿ ಹಳ್ಳಗಳಿಂದ ಉಂಟಾದ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿದವರಿಗಾಗಿ ಒಟ್ಟು ಐದು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 80 ಹಳ್ಳಿಗಳನ್ನು ತೀವ್ರ ನಿಗಾ ಪ್ರದೇಶವೆಂದು ಘೋಷಿಸಲಾಗಿದೆ. ನವಲಗುಂದದಲ್ಲಿ ಅಗ್ನಿಶಾಮಕ ದಳದ ಹೆಚ್ಚುವರಿ ಘಟಕ ತೆರೆಯಲಾಗಿದೆ. ಎಸ್‌ಡಿಆರ್‌ಎಫ್‌ನ ಮತ್ತೊಂದು ತುಕಡಿಯನ್ನು ಜಿಲ್ಲೆಗೆ ಕರೆಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಮಿನಿ ವಿಧಾನಸೌಧದ ನೆಲಮಹಡಿ ಜಲಾವೃತ

ಶ್ರೀರಂಗಪಟ್ಟಣ: ಮಳೆಯಿಂದಾಗಿ ಪಟ್ಟಣದ ಮಿನಿ ವಿಧಾನಸೌಧದ ನೆಲಮಹಡಿ ಜಲಾವೃತವಾಗಿದ್ದು, ಒಂದು ಅಡಿಗೂ ಹೆಚ್ಚು ನೀರು ನಿಂತಿದೆ. ಇಲ್ಲಿರುವ ಕಸಬಾ ಮತ್ತು ಕೆ.ಶೆಟ್ಟಹಳ್ಳಿ ಹೋಬಳಿ ಕಂದಾಯ ನಿರೀಕ್ಷಕರ ಕಚೇರಿಗಳಿಗೂ ನೀರು ನುಗ್ಗಿದೆ. ಮತಪೆಟ್ಟಿಗೆಗಳಲ್ಲಿ ನೀರು ತುಂಬಿಕೊಂಡಿದೆ. ಕಂದಾಯ ನಿರೀಕ್ಷಕರ ಕಚೇರಿಗೆ ಬರುವ ಮಹಿಳೆಯರು, ವೃದ್ಧರು ಮತ್ತು ಅಂಗವಿಕಲರಿಗೆ ಸಮಸ್ಯೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.