ADVERTISEMENT

ಅನರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ: ಹಿರಿಯ ಕಲಾವಿದ ಸದಾಶಿವನ ಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 6:28 IST
Last Updated 9 ನವೆಂಬರ್ 2022, 6:28 IST
   

ಧಾರವಾಡ: ‘ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹ ಕಲಾವಿದರನ್ನು ಕಡೆಗಣಿಸಿ, ಅನರ್ಹರಿಗೆ ಮಣಿ ಹಾಕಲಾಗಿದೆ. ಇದರಿಂದ ನೈಜ ಕಲಾವಿದರಿಗೆ ಅನ್ಯಾಯವಾಗಿದೆ’ ಎಂದು ರಂಗಭೂಮಿಯ ಹಿರಿಯ ಕಲಾವಿದ ಸದಾಶಿವನಗೌಡ ಸಿದ್ದನಗೌಡ ಜನಗೌಡರ ಆಪಾದಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಕ್ಷೇತ್ರದ ರಂಗಭೂಮಿಯ ಕಲಾವಿದ ಅಲ್ಲದ ವ್ಯಕ್ತಿಗೆ ಈ ಕ್ಷೇತ್ರದಿಂದ ಪ್ರಶಸ್ತಿ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ಯಾವ ಮಾನದಂಡಗಳ ಆಧಾರದ ಮೇಲೆ ಅವರನ್ನ ಆಯ್ಕೆ ಮಾಡಲಾಗಿದೆ. ರಂಗಭೂಮಿಗೆ ಅವರ ಕೊಡುಗೆ ಏನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇ’ಕು ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

‘ರಂಗಭೂಮಿ, ಚಲನಚಿತ್ರ, ಕಿರುತೆರೆ ಹಾಗೂ ಧಾರವಾಡ ಆಕಾಶವಾಣಿಯ ಬಿ–ಹೈ ದರ್ಜೆಯ ನಾಟಕ ಕಲಾವಿದನಾಗಿ ಕಳೆದ 60 ವರ್ಷ ಸೇವೆ ಸಲ್ಲಿಸಿದ್ದೇನೆ. ಏಣಗಿ ಬಾಳಪ್ಪನವರ ಕಂಪನಿ, ಸುಳ್ಳದ ದೇಸಾಯಿಯವರ ಕಂಪನಿ, ವೀರೇಶ್ವರ ನಾಟ್ಯ ಸಂಘ ಗುಡಗೇರಿ ಕಂಪನಿ, ಚಿತ್ತರಗಿ, ಕಮತಗಿ ಕಂಪನಿ ಸೇರಿದಂತೆ ಅನೇಕ ಕಂಪನಿಯಲ್ಲಿ ಕೆಲಸ ಮಾಡಿ, ರಂಗಭೂಮಿ ಸೇವೆ ಮಾಡಿದ್ದೇನೆ. ಈವರೆಗೂ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದರೂ ಪರಿಗಣಿಸದೇ ಇರುವುದು ನೋವು ತಂದಿದೆ’ ಎಂದು ಗದ್ಗಧಿತರಾದರು.

ADVERTISEMENT

‘ಅರ್ಹರನ್ನು ಪ್ರಶಸ್ತಿಗೆ ಪರಿಗಣಿಸದೇ ಅನರ್ಹರಿಗೆ ಮಣೆ ಹಾಕುತ್ತಿರುವ ಸರ್ಕಾರ, ಹಿರಿಯ ಕಲಾವಿದರಿಗೆ ಮಾಡಿರುವ ಅವಮಾನವೇ ಸರಿ. ಸಾಕಷ್ಟು ಜನ ಅರ್ಹ ಕಲಾವಿದರಿದ್ದರೂ ಅನರ್ಹರಿಗೆ ಮಣೆ ಹಾಕಿರುವುದನ್ನು ನೋಡಿದರೇ, ಪ್ರಶಸ್ತಿ ಆಯ್ಕೆ ವಾಮಮಾರ್ಗದಿಂದ ಆಗಿದೆ ಎಂಬುದು ಸ್ಪಷ್ಟ. ಇದರಿಂದ ಪ್ರಶಸ್ತಿಯ ಗೌರವಕ್ಕೂ ಧಕ್ಕೆ ಉಂಟಾಗಿದೆ’ ಎಂದು ಬೇಸರಿಸಿದರು.

ನಾನು ಕಳೆದ 10 ವರ್ಷಗಳಿಂದ ಅರ್ಜಿ ಸಲ್ಲಿಸುತ್ತಲೇ ಇದ್ದೇನೆ. ಆದರೆ, ಈವರೆಗೆ ಪುರಸ್ಕಾರ ಲಭಿಸಿಲ್ಲ. ಸರ್ಕಾರ ಅನುಕೂಲಕ್ಕೆ ತಕ್ಕಂತೆ ಮಾನದಂಡ ಬದಲಾಯಿಸುತ್ತಿದೆ. ಇದು ಕಲಾವಿದರಿಗೆ ಮಾಡುವ ಮೋಸ. ಈ ಅನ್ಯಾಯ ಸರಿಪಡಿಸುವ ಮೂಲಕ ಸಾಂಸ್ಕೃತಿಕ ಲೋಕದ ಈ ವ್ಯವಸ್ಥೆಯಲ್ಲಿ ಆಗುತ್ತಿರುವ ಲೋಪ-ದೋಷಗಳನ್ನು ಸರಿಪಡಿಸುವ ಮೂಲಕ ಅರ್ಹರಿಗೆ ಪ್ರಶಸ್ತಿಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.