
ರಾಮಲಿಂಗಾ ರೆಡ್ಡಿ
ಕಲಬುರಗಿ: ‘ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಬಗೆಗೆ ಸದಾ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು, ನೆಹರೂ ಮಾಡಿದ ಒಂದು ರೂಪಾಯಿ ಕೆಲಸದಲ್ಲಿ 10 ಪೈಸೆಯಷ್ಟಾದರೂ ಮಾಡಿಲ್ಲ’ ಎಂದು ಸಚಿವ ರಾಮಲಿಂಗಾ ರೆಡ್ಡಿ ಟೀಕಿಸಿದರು.
ಎಪ್ಸ್ಟೈನ್ ಫೈಲ್ಸ್ ಕುರಿತು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ ಸದಸ್ಯತ್ವ ರದ್ದತಿಗೆ ಬಿಜೆಪಿ ಒತ್ತಾಯಿಸುತ್ತಿರುವ ಕುರಿತು ಪ್ರಶ್ನೆಗೆ ನಗರದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ನೆಹರೂ ನಿಧನರಾಗಿ ಹಲವು ವರ್ಷಗಳಾಗಿದ್ದರೂ ಮೋದಿ ಪ್ರತಿಯೊಂದು ವಿಚಾರದಲ್ಲೂ ನೆಹರೂ ಹೆಸರು ಎಳೆದು ತರುತ್ತಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನೆಹರೂ ಸುಮಾರು 10 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಆದರೆ, ಬಿಜೆಪಿ ಹಾಗೂ ಅವರ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಜೈಲು ಶಿಕ್ಷೆ ಅನುಭವಿಸಿಲ್ಲ. ಸ್ವಾತಂತ್ರ್ಯ ಚಳವಳಿಯಲ್ಲೂ ಭಾಗವಹಿಸಿಲ್ಲ’ ಎಂದು ದೂರಿದರು.
‘ರಾಹುಲ್ ಗಾಂಧಿ ಸದಸ್ಯತ್ವ ರದ್ದತಿಗೆ ಈ ಹಿಂದೆಯೂ ಈ ರೀತಿ ಮಾಡಿದ್ದರು. ಆ ಮೇಲೆ ನ್ಯಾಯಾಲಯದಲ್ಲಿ ಏನಾಯ್ತು? ಅವರಿಗೆ ಹೊಟ್ಟೆ ಸಂಕಟ ತಡೆಯಲು ಆಗುತ್ತಿಲ್ಲ. ರಾಹುಲ್ ಗಾಂಧಿ ಎಲ್ಲವನ್ನೂ ಎಕ್ಸಪೋಸ್ ಮಾಡಿದ್ದಾರಲ್ಲ, ಅದನ್ನು ಅವರಿಗೆ ತಡೆಯೋಕೆ ಸಹಿಸೋಕೆ ಆಗುತ್ತಿಲ್ಲ. ಅದಕ್ಕೆ ಹೀಗೆಲ್ಲ ಪ್ರಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.