ಚಿತ್ರದುರ್ಗ: ‘ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಗುರುತಿಸಿಕೊಂಡವರಿಂದ ಒಳ ಮೀಸಲಾತಿ ದುರ್ಬಳಕೆ ಸಾಧ್ಯತೆ ಇದೆ. ಇವರು ಅರ್ಜಿ ಜೊತೆಗೆ ಮೂಲ ಜಾತಿ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯಗೊಳಿಸಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಒತ್ತಾಯಿಸಿದರು.
‘ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್ ನಡೆಸಿದ ಸಮೀಕ್ಷೆಯಲ್ಲಿ 4,74,954 ಜನರು ಎ.ಡಿ, ಎ.ಕೆ, ಎ.ಎ ಎಂದು ಬರೆಸಿದ್ದಾರೆ. ಇವರಲ್ಲಿ ಹೊಲೆಯ, ಮಾದಿಗ ಎರಡೂ ಸಮುದಾಯದವರು ಇದ್ದಾರೆ. ಇವರ ಮೂಲ ಯಾವುದು?, ಎಲ್ಲಿಂದ ಬಂದಿದ್ದಾರೆ?, ಏಕೆ ಮೂಲ ಜಾತಿ ಬರೆಸಿಲ್ಲ? ಎಂದು ಪತ್ತೆ ಹಚ್ಚಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಸಚಿವರಾದ ಡಾ.ಜಿ.ಪರಮೇಶ್ವರ, ಎಚ್.ಮುನಿಯಪ್ಪ ಅವರು ಆದಿ ದ್ರಾವಿಡ, ಡಾ.ಎಚ್.ಸಿ. ಮಹದೇವಪ್ಪ ಹಾಗೂ ನಾನು ಆದಿ ಕರ್ನಾಟಕ ಎಂದು ಪ್ರಮಾಣಪತ್ರ ಪಡೆದಿದ್ದೇವೆ. ಜೊತೆಗೆ ನಮ್ಮ ಮೂಲ ಜಾತಿಯನ್ನೂ ಬರೆಸಿದ್ದೇವೆ. ಮೂಲ ಜಾತಿ ಪ್ರಮಾಣಪತ್ರ ನೀಡದವರು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗುಳಿಯಬೇಕು. ಮೂಲ ಜಾತಿ ಬರೆಸದೇ ಒಳಮೀಸಲಾತಿಯಿಂದ ಉದ್ಯೋಗ ಪಡೆದರೆ ಹೋರಾಟ ನಡೆಸಲು ಮಾದಿಗರ ಮೀಸಲಾತಿ ರಕ್ಷಣಾ ಸಮಿತಿ ರಚಿಸುತ್ತೇವೆ’ ಎಂದರು.
‘ಶಿಕ್ಷಣ, ಉದ್ಯೋಗದ ಜೊತೆಗೆ ನೌಕರರ ಬಡ್ತಿಯಲ್ಲೂ ಒಳ ಮೀಸಲಾತಿ ಜಾರಿಗೊಳಿಸಬೇಕು. ಒಳ ಮೀಸಲಾತಿಯಲ್ಲಿ ಅಲೆಮಾರಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಶೇ 1ರಷ್ಟು ಮೀಸಲಾತಿಯನ್ನು ಹೊಸದಾಗಿ ಸೃಷ್ಟಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತಿಸಬೇಕು. ಇರುವ ಮೀಸಲಾತಿಯಲ್ಲೇ ಅವರಿಗೆ ಪಾಲು ನೀಡಲು ಇತರ ಸಮುದಾಯಗಳು ಔದಾರ್ಯ ತೋರಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.