ಕೊಪ್ಪಳ: ಸುಪ್ರೀಂ ಕೋರ್ಟ್ ಆದೇಶದಂತೆ, ಜನಸಂಖ್ಯೆಗೆ ಅನುಗುಣವಾಗಿ, ನಾಗಮೋಹನದಾಸ್ ವರದಿಯಂತೆ ಅಥವಾ ಮಾಧುಸ್ವಾಮಿ ಆಯೋಗದ ಶಿಫಾರಸಿನಂತೆ ಒಳಮೀಸಲಾತಿ ವರ್ಗೀಕರಣ ಆಗಿಲ್ಲ, ಹೀಗಾಗಿ ಸರ್ಕಾರ ಈಗ ಮಾಡಿರುವ ಒಳಮೀಸಲಾತಿ ವರ್ಗೀಕರಣವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ತಾಲ್ಲೂಕಿನ ಮುನಿರಾಬಾದ್ನಲ್ಲಿ ಗುರುವಾರ ಒಳಮೀಸಲಾತಿಯ ಮುಂದಿನ ನಡೆಗಳ ಕುರಿತು ಚಿಂತನ ಮಂಥನ ಸಭೆ ನಡೆಸುವುದಕ್ಕೆ ಮೊದಲಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾವುದೇ ಜನಾಂಗದ ವಿರೋಧಿಗಳಲ್ಲ. ಸುಪ್ರೀಂ ಕೋರ್ಟ್ ಹಿಂದುಳಿದವರನ್ನು ಗುರುತಿಸುವಿಕೆಯ ವಿಚಾರದಲ್ಲಿ ಸ್ಪಷ್ಟ ಮಾರ್ಗದರ್ಶನ ನೀಡಿದ್ದರೂ ಅದನ್ನು ಅನುಸರಿಸಿಲ್ಲ ಎಂಬುದೇ ನಮ್ಮ ಆಕ್ಷೇಪ ಎಂದರು.
ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರಗಳು 2011ರಿಂದಲೂ ಒಳಮೀಸಲಾತಿ ಪರವಾಗಿಯೇ ಇದ್ದವು. ಆದರೆ ಸಿದ್ದರಾಮಯ್ಯ ಮತ್ತು ಅವರ ತಂಡದವರು ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನ ಮಾಡುತ್ತಲೇ ಬಂದರು. ನಾಗಮೋಹನದಾಸ್ ಆಯೋಗ ಬಹಳ ವೈಜ್ಞಾನಿಕವಾಗಿಯೇ ವರದಿ ಸಲ್ಲಿಸಿದ್ದರೂ ಅದನ್ನು ಒಪ್ಪಲು ಸಿದ್ಧವಿಲ್ಲದ ರಾಜ್ಯ ಸರ್ಕಾರ ಕೇವಲ ಮೂರು ವಿಭಾಗ ಮಾಡಿ ಅಲೆಮಾರಿಗಳಿಗೆ ಘೋರ ಅನ್ಯಾಯ ಮಾಡಿದೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ತೀರಾ ವಿರುದ್ಧವಾದುದು ಎಂದರು.
ಸರ್ಕಾರಕ್ಕೆ ಒಳಮೀಸಲಾತಿ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ನಿಜವಾಗಿಯೂ ಮನಸ್ಸಿದ್ದರೆ ನಾಗಮೋಹನದಾಸ್ ವರದಿಯನ್ನು ಯಥಾವತ್ ಜಾರಿಗೆ ಮತ್ತೊಮ್ಮೆ ಸಂಪುಟದ ಮುಂದೆ ತನ್ನಿಗೋವಿಂದ ಕಾರಜೋಳ, ಸಂಸದ
ಜಾತಿಗಣತಿ ಬಹಿಷ್ಕಾರದ ಎಚ್ಚರಿಕೆ:
ಕೇಂದ್ರದ ಮಾಜಿ ಸಚಿವ ಎ.ನಾರಾಯಣ ಸ್ವಾಮಿ ಮಾತನಾಡಿ, ಸೆ.22ರಿಂದ ಮತ್ತೊಮ್ಮೆ ಜಾತಿಗಣತಿ ನಡೆಯಲಿದೆ, ಹಿಂದುಳಿದ ಆಯೋಗದಿಂದ ಪ್ತತಿಯೊಂದು ಜಾತಿಗೂ ಕ್ರಿಶ್ಚಿಯನ್ ಜಾತಿಯ ಹೆಸರು ಸೇರಿಸಲಾಗಿದೆ. ಸೋನಿಯಾ ಗಾಂಧಿಯವರನ್ನು ಖುಷಿಪಡಿಸಲು ಮಾಡಿದಂತಹ ತಂತ್ರ ಇದು. ಹಿಂದೂ ಜಾತಿಗಳ ಹೆಸರಿನೊಂದಿಗೆ ಸೇರಿಸಲಾದ ಕ್ರಿಶ್ಚಿಯನ್ ಪದವನ್ನು ತಕ್ಷಣ ತೆಗೆದು ಸಮೀಕ್ಷೆಗೆ ಬರಬೇಕು, ಇಲ್ಲವಾದರೆ ಸಮೀಕ್ಷೆಯನ್ನು ಬಹಿಷ್ಕರಿಸಲು ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಡೀ ಹಿಂದೂ ಸಮಾಜವನ್ನು ಒಡೆಯುವ ತಂತ್ರಗಾರಿಕೆ ಈ ಕ್ರಿಶ್ಚಿಯನ್ ಪದ ಸೇರಿಸುವುದರ ಹಿಂದೆ ಇದೆ. ಪ್ರತಿಯೊಂದು ಹಿಂದೂ ಹಸರಿನೊಂದಿಗೆ ಕ್ರಿಶ್ಚಿಯನ್ ಹೆಸರು ಸೇರಿಸಿ ಹಿಂದೂಗಳ ಜನಸಂಖ್ಯೆಯ ಪ್ರಮಾಣವನ್ನು ಹೆಚ್ಚುಕಡಿಮೆ ಮಾಡಿಸುವ ಹುನ್ನಾರ ನಡೆದಿದೆ. ಈಗಿನ ಸ್ಥಿತಿಯಲ್ಲೇ ಮನೆ ಮನೆಗೆ ಸಮೀಕ್ಷೆ ನಡೆಸುವುದಾದರೆ ಅದನ್ನು ಜನ ಸಾರ್ವತ್ರಿಕವಾಗಿ ತಿರಸ್ಕರಿಸಬೇಕು ಎಂದು ನಾರಾಯಣಸ್ವಾಮಿ ಸೂಚಿಸಿದರು.
ಶೈಕ್ಷಣಿಕ ಪ್ರಗತಿಗೆ ಪ್ರಯತ್ನ:
ನಾಗಮೋಹನದಾಸ್ ವರದಿಯಂತೆ ಮಾದಿಗ ಸಮುದಾಯದವರಲ್ಲಿ ಉನ್ನತ ಶಿಕ್ಷಣದಲ್ಲಿ ಕಾಲೇಜನ್ನು ಅರ್ಧದಲ್ಲೇ ಬಿಡುವವರ ಸಂಖ್ಯೆ ಶೇ 44ರಷ್ಟು ಇರುವುದು ಗೊತ್ತಾಗಿದೆ. ಇದು ಬಹಳ ಗಂಭೀರ ವಿಚಾರ. ಸರ್ಕಾರ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡದಿರುವುದೇ ಇದಕ್ಕೆ ಕಾರಣ. ಮಾದಿಗ ಸಮುದಾಯದವರು ಎಸ್ಎಸ್ಎಲ್ಸಿ ಪಾಸ್ ಮಾಡಿಕೊಂಡು ಮುಂದೆ ಬಂದಾಗ, ಉನ್ನತ ಶಿಕ್ಷಣಕ್ಕೆ ಅವರಿಗೆ ನೆರವಾಗುವ ನಿಟ್ಟನಲ್ಲಿ ಸಮುದಾಯದ ಸುಶಿಕ್ಷಿತರು ಪ್ರಯತ್ನಿಸಬೇಕು ಎಂದರು.
ಮಾಜಿ ಶಾಸಕ ಬಸವರಾಜ ದಡೇಸುಗೂರು, ಮುಖಂಡ ಹನುಮಂತಪ್ಪ ಬಳ್ಳಾರಿ, ಐಎಎಸ್ ನಿವೃತ್ತ ಅಧಿಕಾರಿಗಳಾದ ಲಕ್ಷ್ಮೀನಾರಾಯಣಸ್ವಾಮಿ, ಅನಿಲ್ ಕುಮಾರ್ ಇತರರು ಇದ್ದರು.
ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ಗೊಂದಲ ಮುಗಿಯಬಾರದು ಎಂದೇ ಇದೆ. ಈ ಸರ್ಕಾರ ಅಲ್ಪಸಂಖ್ಯಾತರು ಮತ್ತು ಬಲಗೈ ಸಮುದಾಯದವರ ಕಪಿಮುಷ್ಠಿಯಲ್ಲಿದೆಎ.ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ
ಸೋನಿಯಾ, ರಾಹುಲ್ ಮೆಚ್ಚಿಸಲು ಗಲಭೆ
ಕೊಪ್ಪಳ: ಮದ್ದೂರಿನಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಆಗಿರುವ ವಿದ್ಯಮಾನ ರಾಜ್ಯ ಸರ್ಕಾರದ ಪ್ರಾಯೋಜಿತ ಜಾತಿ ಸಂಘರ್ಷ ಕಾರ್ಯಕ್ರಮವಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ರಾಜ್ಯ ಸರ್ಕಾರವೇ ಈ ಕುತಂತ್ರ ಎಸಗಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
‘ಹಿಂದೂಗಳ ಹಬ್ಬ ಬಂದಾಗ ಧರ್ಮ ಸಂಬಂಧಿತ ಗಲಭೆ ಆಗುತ್ತದೆ ಎಂದು ಸರ್ಕಾರವೇ ಮೊದಲು ಗುಲ್ಲೆಬ್ಬಿಸುತ್ತದೆ. ಕೇಸರಿ ಧ್ವಜ ಹಿಡಿಯಬಾರದು ಎಂಬ ಮೌಖಿಕ ಆದೇಶ ಹೊರಡಿಸಲಾಗುತ್ತದೆ. ಹಿಂದೂಗಳ ಹಬ್ಬಗಳಲ್ಲಿ ಗಲಾಟೆ ಎಬ್ಬಿಸಿ, ಅಶಾಂತಿ ಸೃಷ್ಟಿಯಾಗುವಂತೆ ಮಾಡುವುದು ಸರ್ಕಾರದ ಉದ್ದೇಶ. ಪಾಕಿಸ್ತಾನ ಜಿಂದಾಬಾದ್ ಎಂದು ಭದ್ರಾವತಿಯಲ್ಲಿ ಹೇಳಿದವರನ್ನು ಬಿಡಿ, ವಿಧಾನಸೌಧದಲ್ಲಿ ಹೇಳಿದವರಿಗೇ ಶಿಕ್ಷೆ ವಿಧಿಸದ ಸರ್ಕಾರ ಇದು. ರಾಜ್ಯದಲ್ಲಿರುವುದು ಲಜ್ಜೆಗೆಟ್ಟ ಸರ್ಕಾರ’ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.