ADVERTISEMENT

‘ಕಮಲ’ಪಡೆಗೆ ಸಂದೇಹ: ಅತೃಪ್ತರ ‘ಅಜ್ಞಾತ’ವಾಸ

ವಿಶ್ವಾಸಘಾತದ ಭೀತಿ: ಬಿಜೆಪಿಯ ಎಚ್ಚರಿಕೆ ನಡೆಗೆ ಕಾರಣ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 19:46 IST
Last Updated 24 ಜುಲೈ 2019, 19:46 IST
   

ಬೆಂಗಳೂರು: ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನವಾದರೂ; ‘ಅತೃಪ್ತ ಶಾಸಕ’ರ ನಡೆಇನ್ನೂ ನಿಗೂಢವಾಗಿದೆ. ಅದರಲ್ಲೂ ನಾಲ್ಕೈದು ಅತೃಪ್ತ ಶಾಸಕರ ‘ಪ್ರಾಮಾಣಿಕತೆ’ ಬಗ್ಗೆ ಬಿಜೆಪಿಯಲ್ಲೇ ಸಂದೇಹ ಉಳಿದಿದೆ.

ಹೀಗಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಧಾವಂತದಲ್ಲಿ ಪ್ರಮಾಣ ಸ್ವೀಕರಿಸಲು ವರಿಷ್ಠರು ಹಸಿರು ನಿಶಾನೆ ತೋರಿಲ್ಲ.

ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಇಡೀ ದಿನ ತಮ್ಮ ಕಚೇರಿಯಲ್ಲಿದ್ದರು. ಆದರೆ, ರಾಜೀನಾಮೆ ಪ್ರಕರಣಗಳ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ.

ADVERTISEMENT

ಸರ್ಕಾರ ಪತನವಾದರೂ ಅತೃಪ್ತ ಶಾಸಕರು ಮಾತ್ರ ಮುಂಬೈನಲ್ಲಿ ಉಳಿದುಕೊಂಡಿದ್ದಾರೆ. ಬುಧವಾರ ಬೆಂಗಳೂರಿಗೆ ಬರುವ ನಿರೀಕ್ಷೆ ಇತ್ತು. ಸಭಾಧ್ಯಕ್ಷರು ರಾಜೀನಾಮೆ ಪ್ರಕರಣ ಇತ್ಯರ್ಥ ಮಾಡದ ಹೊರತು ಬೆಂಗಳೂರಿಗೆ ಬರುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಒಂದು ವೇಳೆ ಬಂದರೆ ಕಾಂಗ್ರೆಸ್‌ ನಾಯಕರು ಹಿಡಿದಿಟ್ಟು ರಾಜೀನಾಮೆ ಹಿಂದಕ್ಕೆ ಪಡೆಯಲು ಒತ್ತಡ ಹೇರಬಹುದು ಎನ್ನುವ ಭಯವೂ ಅವರಿಗಿದೆ. ಹೀಗಾಗಿ ಮುಂಬೈನಲ್ಲಿ ಬೀಡು ಬಿಟ್ಟಿರುವ ಶಾಸಕರು ಇನ್ನೂ ಕೆಲವು ದಿನಗಳ ಕಾಲ ಅಜ್ಞಾತವಾಸದಲ್ಲೇ ಇರಬೇಕಾಗುತ್ತದೆ. ಒಂದೋ ರಾಜೀನಾಮೆ ಅಂಗೀಕಾರ ಆಗಬೇಕು ಇಲ್ಲವೇ, ಅನರ್ಹಗೊಳ್ಳಬೇಕು. ಆ ಬಳಿಕವೇ ಅವರು ನಗರಕ್ಕೆ ಬರಲಿ ಎಂಬುದು ಬಿಜೆಪಿ ಪಾಳಯದ ಲೆಕ್ಕಾಚಾರ. ಅದಕ್ಕೆ ಮೊದಲೇ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವುದೂ ಕಷ್ಟವಾಗುತ್ತದೆ.

ಒಂದು ವೇಳೆ ಗುರುವಾರ ಅಥವಾ ಶುಕ್ರವಾರ ಪ್ರಮಾಣ ಸ್ವೀಕರಿಸಿದರೆ, ಸೋಮವಾರ ಬಹುಮತ ಸಾಬೀತು ಮಾಡಬೇಕಾಗುತ್ತದೆ. ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರಗೊಳ್ಳದೇ ಅಥವಾ ಅನರ್ಹತೆ ಪ್ರಕ್ರಿಯೆ ನಡೆಯದೇ ಇದ್ದರೆ, ಬಹುಮತ ಸಾಬೀತುಪಡಿಸುವಾಗ ಕೆಲವರು ರಾಜೀನಾಮೆ ಹಿಂದಕ್ಕೆ ಪಡೆದರೆ,ಬಿಜೆಪಿ ಇಕ್ಕಟ್ಟಿಗೆ ಸಿಲುಕಲೂಬಹುದು. ಸುಖಾ ಸುಮ್ಮನೆ ಹಳ್ಳಕ್ಕೆ ಬೀಳುವುದು ಏತಕ್ಕೆ ಎಂಬ ಚಿಂತನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರದ್ದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹರಾದರೆ ಮಾತ್ರ ಸರ್ಕಾರ ರಚನೆ ಸುಗಮ ಎಂಬುದು ಶಾ ಅವರ ಲೆಕ್ಕಾಚಾರ. ಅತೃಪ್ತರಲ್ಲಿ ಸಿದ್ದರಾಮಯ್ಯ ಶಿಷ್ಯರೂ ಇರುವುದೇ ಬಿಜೆಪಿ ವರಿಷ್ಠರ ಚಿಂತೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ, ಇವರಲ್ಲಿ ಕೆಲವರು ಹಿಂದೊಮ್ಮೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ಹೇಳಿದ್ದರು. ಇವರ ಹಿನ್ನೆಲೆ ಗಮನಿಸಿರುವ ಶಾ ಅವರು ಅಷ್ಟು ಬೇಗಯಾರನ್ನೂ ನಂಬುವುದಿಲ್ಲ’ ಎಂದು ಮೂಲಗಳು ಹೇಳಿವೆ. ಕುಮಾರಸ್ವಾಮಿ ಸರ್ಕಾರ ಪತನಗೊಳಿಸಿ, ತಮ್ಮ ನಾಯಕನನ್ನು ಮತ್ತೆ ಮುಖ್ಯಮಂತ್ರಿ ಮಾಡಿಸಲು ಅತೃಪ್ತರಲ್ಲಿ ಸಿದ್ದರಾಮಯ್ಯ ಕಡೆಯವರೂ ಈ ಗುಂಪಿನಲ್ಲಿ ಸೇರಿಕೊಂಡಿರಲೂಬಹುದು ಎಂಬ ಸಂಶಯ ಶಾ ಅವರಿಗೆ ನಿವಾರಣೆ ಆಗಿಲ್ಲ. ಏಕೆಂದರೆ ನಾಲ್ಕೈದು ಶಾಸಕರು ಬಿಜೆಪಿ ಪ್ರಯತ್ನ ಇಲ್ಲದೇ ಬಂದಿದ್ದಾರೆ. ಇದು ಸಂಶಯಕ್ಕೆ ಕಾರಣ.

ರಾಜೀನಾಮೆ ಅಂಗೀಕಾರ ಅಥವಾ ಅನರ್ಹಗೊಂಡರೆ ತಕ್ಷಣವೇ ಪ್ರಮಾಣ ವಚನ ಸ್ವೀಕಾರಕ್ಕೆ ಸೂಚಿಸಲೂ ಬಹುದು. ಈ ಪ್ರಕ್ರಿಯೆ ಮುಗಿಯುವವರೆಗೆ ಮುಂಬೈನಲ್ಲೇ ಶಾಸಕರು ಇರಲೇಬೇಕಾಗುತ್ತದೆ. ಅಲ್ಲಿಯವರೆಗೆ ಬಿಜೆಪಿಯೂ ಕಾದು ನೋಡುವ ತಂತ್ರ ಅನುಸರಿಸಲಿದೆ ಎನ್ನಲಾಗಿದೆ.

ಅತೃಪ್ತರ ಶಾಸಕರ ಸರಣಿ ಸಭೆ

ಬೆಂಗಳೂರಿಗೆ ತಕ್ಷಣವೇ ಹೊರಡುವುದೋ ಅಥವಾ ಹೊಸ ಸರ್ಕಾರ ರಚನೆ ಆದ ಬಳಿಕ ಹೋಗುವುದೊ ಎಂಬ ಬಗ್ಗೆ ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಬುಧವಾರ ಸರಣಿ ಸಭೆ ನಡೆಸಿದರು. ಸಭಾಧ್ಯಕ್ಷರು ಯಾವ ನಿರ್ಧಾರ ತೆಗೆದುಕೊಳ್ಳಬಹುದು. ಅದರಿಂದ ಆಗುವ ಪರಿಣಾಮಗಳ ಬಗ್ಗೆ ಚರ್ಚಿಸಿದ ಅವರು ಮುಂದೆ ಏನು ಮಾಡಬೇಕು ಎಂಬ ಬಗ್ಗೆಯೂ ವಕೀಲರ ಜತೆ ಚರ್ಚಿಸಿದರು. ಅನರ್ಹಗೊಳಿಸಿದರೆ, ಸುಪ್ರೀಂಕೋರ್ಟ್‌ಗೆ ಮೊರೆ ಹೋಗಲೂ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.