ADVERTISEMENT

ಹೊಗೆನಕಲ್ ಜಲಪಾತ ವೀಕ್ಷಣೆಗಿಲ್ಲ ಅವಕಾಶ

ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದೆ; ಕೈ ಬೀಸಿ ಕರೆಯುತ್ತಿದೆ...

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 13:05 IST
Last Updated 9 ಆಗಸ್ಟ್ 2020, 13:05 IST
ಹನೂರು ತಾಲ್ಲೂಕಿನ ಹೊಗೆನಿಕಲ್ ನಲ್ಲಿ ತುಂಬಿ ಹರಿಯುತ್ತಿರುವ ಕಾವೇರಿ
ಹನೂರು ತಾಲ್ಲೂಕಿನ ಹೊಗೆನಿಕಲ್ ನಲ್ಲಿ ತುಂಬಿ ಹರಿಯುತ್ತಿರುವ ಕಾವೇರಿ   

ಹನೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದ ಪರಿಣಾಮ ನದಿ ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಹೊಗೆನಕಲ್ ಜಲಪಾತ ಭೋರ್ಗರೆಯುತ್ತಿದೆ.

ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳ ಹೊರ ಹರಿವು ಹೆಚ್ಚಾಗಿರುವುದರಿಂದ ಒಂದು ವಾರದಿಂದೀಚೆಗೆ ಹೊಗೆನಕಲ್ ಜಲಪಾತಕ್ಕೆ ಜೀವಕಳೆ ಬಂದಿದೆ. ಬಂಡೆಗಳ, ಕೊರಕಲುಗಳ ಮೂಲಕ ಹಲವು ಕವಲುಗಳಾಗಿ ಪ್ರಪಾತಕ್ಕೆ ಜಿಗಿಯುತ್ತಿರುವ ನೀರು ದೂರದಿಂದ ಹಾಲ್ನೊರೆಯಂತೆ ಭಾಸವಾಗುತ್ತಿದೆ. ಎತ್ತ ನೋಡಿದರೂ ಬೆಟ್ಟಗಳ ರಾಶಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ.

ಆದರೆ, ಪ್ರತಿ ಮಳೆಗಾಲದ ಸಂದರ್ಭದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಹೊಗೆನಕಲ್ ಜಲಪಾತ ಈ ಬಾರಿ ಪ್ರವಾಸಿಗರಿಲ್ಲದೇ ಸಪ್ಪೆಯಾಗಿದೆ. ಸದಾ ತೆರೆದಿರುತ್ತಿದ್ದ ಅಂಗಡಿಗಳು ಈಗ ಬಂದ್ ಆಗಿವೆ.ತೆಪ್ಪಗಳೆಲ್ಲಾ ನದಿಯ ದಡದಲ್ಲೇ ಬಿದ್ದಿವೆ. ನದಿಯಲ್ಲಿ ತೆಪ್ಪ ನಡೆಸುವುದನ್ನೇ ಜೀವನ ಮಾಡಿಕೊಂಡಿದ್ದ ಜನರು ಈಗ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದಾರೆ.

ADVERTISEMENT

ಹೆಚ್ಚಿದ ನೀರಿನ ಪ್ರಮಾಣ: ಪ್ರತಿ ವರ್ಷದಂತೆ ಈ ವರ್ಷವೂ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ.ತೆಪ್ಪ ವಿಹಾರಕ್ಕೆ ತೆರಳುವ ಸ್ಥಳದಲ್ಲಿ ಮೆಟ್ಟಿಲುಗಳು ಮುಳುಗಡೆಯಾಗಿದೆ. ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿ ತೀರಕ್ಕೆ ತೆರಳದಂತೆ ಅರಣ್ಯ ಇಲಾಖೆ ಸ್ಥಳೀಯರಿಗೆ ಸೂಚನೆ ನೀಡಿದೆ.

‘ರಾಜ್ಯದ ಗಡಿಭಾಗದಲ್ಲಿರುವ ಹೊಗೆನಕಲ್ ಜಲಪಾತಕ್ಕೆ ತಮಿಳುನಾಡಿನಿಂದಲೂ ಪ್ರವಾಸಿಗರು ಬರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿದೆ. ಆದ್ದರಿಂದ, ಪರಿಸ್ಥಿತಿಯನ್ನು ಅವಲೋಕಿಸಿ ಜಿಲ್ಲಾಡಳಿತವೇ ಹೊಗೆನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅನುಮತಿ ನೀಡಲಿದೆ’ ಎಂದು‘ಪ್ರಜಾವಾಣಿ’ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಮನೋಜ್ ಕುಮಾರ್ ತಿಳಿಸಿದರು.

‘ಜಿಲ್ಲೆಯ ಪ್ರವಾಸಿ ತಾಣಗಳನ್ನು ಮುಕ್ತಗೊಳಿಸಲು ಕೆಲವು ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಪ್ರವಾಸಿಗರಿಗೆ ಅನುಮತಿ ಕಲ್ಪಿಸಿಲ್ಲ. ಶೀಘ್ರದಲ್ಲೇ ಕೆಲವು ಅಗತ್ಯನಿಯಮಗಳನ್ನು ರೂಪಿಸಿ ಪ್ರವಾಸಿ ತಾಣಗಳ ವೀಕ್ಷಣೆಗೆಅನುಮತಿ ನೀಡಲಾಗುವುದು’ ಎಂದು ಹನೂರು ಪ್ರಭಾರ ತಹಶೀಲ್ದಾರ್ ಕೆ.ಕುನಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.