ಕಲಬುರ್ಗಿ: ಅಕ್ರಮವಾಗಿ ಪಡಿತರ ಅಕ್ಕಿ ಹಾಗೂ ಗೋಧಿಯನ್ನು ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಲು ನಗರದ ಕಪನೂರ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀ ರಾಮಲಿಂಗೇಶ್ವರ ದಾಲ್ ಮತ್ತು ಪ್ಲೋರ್ ಮಿಲ್ನಲ್ಲಿ ಸಂಗ್ರಹಿಸಿಟ್ಟಿದ್ದ 187 ಕ್ವಿಂಟಲ್ ಅಕ್ಕಿ, 72 ಕ್ವಿಂಟಲ್ ಗೋಧಿ, 36 ಕ್ಷೀರ ಭಾಗ್ಯ ಹಾಲಿನ ಪೌಡರ್ ಪಾಕೇಟ್, ಎರಡು ತೂಕದ ಯಂತ್ರ ಹಾಗೂ ಆಹಾರ ಸಾಮಗ್ರಿಗಳನ್ನು ಸಾಗಿಸಲು ಬಳಸುತ್ತಿದ್ದ ಟಾಟಾ 407 ಟೆಂಪೊ ವಾಹನವನ್ನು ವಶಪಡಿಸಿಕೊಂಡು ಕಲಬುರ್ಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಕಲಬುರ್ಗಿ ಪಡಿತರ ಪ್ರದೇಶದ ಆಹಾರ ನಿರೀಕ್ಷಕರು ದಾಳಿ ನಡೆಸಿ ವಿವಿಧ ಪಡಿತರ ಪದಾರ್ಥ ಹಾಗೂ ಟಾಟಾ ಟೆಂಪೊವನ್ನು ಜಪ್ತಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣಸಿದ್ದೇಶ್ವರ ಕಾಲೊನಿಯ ರೇವಣಸಿದ್ದಪ್ಪ ಮಹಾಜನ, ಕಲಬುರ್ಗಿಯ ಮಹಮ್ಮದ್ ಗೌಸ್, ಮಿಸ್ಬಾ ನಗರದ ವಾಹನ ಚಾಲಕ ಚಾಂದಷಾ ತಾಹೆರ್ ಅಲಿ ಹಾಗೂ ಈ ದಾಲ್ ಮತ್ತು ಪ್ಲೋರ್ ಮಿಲ್ನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಸರಕುಗಳ ಒಟ್ಟು ಮೌಲ್ಯ ₹ 16.59 ಲಕ್ಷ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.