ADVERTISEMENT

ಶಿರಾ, ಆರ್.ಆರ್.ನಗರ ಉಪ ಚುನಾವಣೆ, ಪರಿಷತ್‌: ಫಲಿತಾಂಶ ಇಂದು

ಶಿರಾ, ಆರ್.ಆರ್.ನಗರ ಫಲಿತಾಂಶದತ್ತ ಕುತೂಹಲ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 20:35 IST
Last Updated 9 ನವೆಂಬರ್ 2020, 20:35 IST
ಆರ್.ಆರ್.ನಗರದ ಶಾಲೆಯೊಂದರಲ್ಲಿ ಮತ ಎಣಿಕೆಗೆ ಸಜ್ಜುಗೊಳಿಸಿರುವುದು
ಆರ್.ಆರ್.ನಗರದ ಶಾಲೆಯೊಂದರಲ್ಲಿ ಮತ ಎಣಿಕೆಗೆ ಸಜ್ಜುಗೊಳಿಸಿರುವುದು   

ಬೆಂಗಳೂರು: ಇದೇ 3ರಂದು ಉಪ ಚುನಾವಣೆ ನಡೆದ ಆರ್‌.ಆರ್‌. ನಗರ, ಶಿರಾ ಕ್ಷೇತ್ರ ಹಾಗೂ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆಅ. 28ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ನಡೆಯಲಿದೆ. ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂಬುದು ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ.

ಆರ್‌.ಆರ್‌. ನಗರ ಕ್ಷೇತ್ರದ ಮತ ಎಣಿಕೆ ಅದೇ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಲಗೇವಡೇರ ಹಳ್ಳಿಯಲ್ಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯಲಿದೆ. ಶಿರಾ ಕ್ಷೇತ್ರದ ಮತ ಎಣಿಕೆ ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ನಡೆಯಲಿದೆ.

ಮತ ಎಣಿಕೆಗೂ ಮೊದಲು ಬೆಳಿಗ್ಗೆ 7.30ಕ್ಕೆ ಚುನಾವಣಾ ವೀಕ್ಷಕರು ಮತ್ತು ಅಭ್ಯರ್ಥಿಗಳು ಅಥವಾ ಅವರ ಏಜೆಂಟರ ಸಮ್ಮುಖದಲ್ಲಿ ಮತ ಯಂತ್ರಗಳನ್ನು ಇರಿಸಿದ ಭದ್ರತಾ ಕೊಠಡಿ ತೆರೆಯಲಾಗುತ್ತದೆ. ಮೊದಲು ಅಂಚೆ ಮತಗಳು, 8.30ರಿಂದ ಮತಯಂತ್ರಗಳ (ಇವಿಎಂ) ಮತಗಳ ಎಣಿಕೆ ನಡೆಯಲಿದೆ.

ADVERTISEMENT

ಶಿರಾದಲ್ಲಿ ಎರಡು ಕೊಠಡಿಗಳಲ್ಲಿ ಒಟ್ಟು 14 ಟೇಬಲ್‌ಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಆರ್‌.ಆರ್‌. ನಗರದಲ್ಲಿ ನಾಲ್ಕು ಕೊಠಡಿಗಳಲ್ಲಿ ಏಳು ಟೇಬಲ್‌ಗಳಂತೆ ಸೇರಿ ಒಟ್ಟು 28 ಟೇಬಲ್‌ಗಳು ಇರಲಿವೆ. ಎರಡೂ ಕಡೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದೂ ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಪರಿಷತ್‌ ಚುನಾವಣೆ– ಮತಎಣಿಕೆ: ಪಶ್ಚಿಮ ಪದವೀಧರ ಕ್ಷೇತ್ರದ ಮತ ಎಣಿಕೆ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದರೆ, ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಗುಲ್ಬರ್ಗ ವಿಶ್ವವಿದ್ಯಾಲಯದ ಗಣಿತ ವಿಜ್ಞಾನ ವಿಭಾಗದಲ್ಲಿ ನಡೆಯಲಿದೆ.

ಆಗ್ನೇಯ ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಬೆಂಗಳೂರಿನ ಡಾ.ಬಿ.ಆರ್‌. ಅಂಬೇಡ್ಕರ್‌ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.