ADVERTISEMENT

ಹೆಣ್ಣು ರಾಜಕೀಯಕ್ಕೆ ಬರೋದು ತಪ್ಪೆ?

ಆರ್‌.ಆರ್‌.ನಗರ: ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 19:39 IST
Last Updated 30 ಅಕ್ಟೋಬರ್ 2020, 19:39 IST
ಕುಸುಮಾ ಎಚ್‌. ಪರ ಮತಯಾಚನೆಗೆ ಶುಕ್ರವಾರ ನಡೆದ ರೋಡ್‌ ಷೋದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಕಾಂಗ್ರೆಸ್‌ ಬಾವುಟ ಹಿಡಿದು ಸಾಗುತ್ತಿದ್ದ ದೃಶ್ಯ
ಕುಸುಮಾ ಎಚ್‌. ಪರ ಮತಯಾಚನೆಗೆ ಶುಕ್ರವಾರ ನಡೆದ ರೋಡ್‌ ಷೋದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಕಾಂಗ್ರೆಸ್‌ ಬಾವುಟ ಹಿಡಿದು ಸಾಗುತ್ತಿದ್ದ ದೃಶ್ಯ   

ಬೆಂಗಳೂರು: ಹೆಣ್ಣು ರಾಜಕೀಯಕ್ಕೆ ಬರೋದು ತಪ್ಪೇ? ಜನರ ಸೇವೆ ಮಾಡೋದು ತಪ್ಪೇ? ಎಂದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌. ಪ್ರಶ್ನಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಕ್ಷೇತ್ರದ ವ್ಯಾಪ್ತಿಯಲ್ಲಿ ಶುಕ್ರವಾರ ರೋಡ್‌ ಷೋ ನಡೆಸಿ ಮತ ಯಾಚಿಸಿದ ಅವರು, ‘ಕಾಂಗ್ರೆಸ್‌ ಮಹಿಳೆಗೆ ಅವಕಾಶ ನೀಡಿದೆ. ಅದನ್ನು ಸಹಿಸದ ಎದುರಾಳಿಗಳು ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ’ ಎಂದರು.

ರಾಜಕೀಯದಲ್ಲಿ ಮಹಿಳೆಯರಿಗೆ ಅವಕಾಶ ಸಿಗುವುದು ವಿರಳ. ಅಂತಹ ಅವಕಾಶವೊಂದನ್ನು ಕಾಂಗ್ರೆಸ್‌ ಕಲ್ಪಿಸಿದೆ. ಮಹಿಳೆಯೂ ಅತ್ಯುತ್ತಮವಾಗಿ ದೇಶದ ಸೇವೆ ಮಾಡಲು ಸಮರ್ಥಳು ಎಂಬುದನ್ನು ನಿರೂಪಿಸಲು ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ADVERTISEMENT

‘ಉಪ ಚುನಾವಣೆಯ ಅಭ್ಯರ್ಥಿಯ ಆಯ್ಕೆಯಲ್ಲಿ ನನ್ನ ಹೆಸರು ಪ್ರಸ್ತಾಪ ಆಗುತ್ತಿದ್ದಂತೆಯೇ ನನ್ನ ಮೇಲೆ ಗದಾಪ್ರಹಾರ ಆರಂಭವಾಯಿತು. ನನ್ನ ಗಂಡನ ಹೆಸರನ್ನು ನಾನು ಚುನಾವಣೆಯಲ್ಲಿ ಬಳಸಬಾರದು ಎಂದು ಕೆಲವರು ಹೇಳಿದರು. ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲ ತೊಂದರೆ ನೀಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅರ್ಹ ಅಭ್ಯರ್ಥಿಯನ್ನು ಬೆಂಬಲಿಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಆ ನೀಚ ರಾಜಕಾರಣಿ ಪಕ್ಷದಿಂದ ತೊಲಗಿದ್ದು ಒಳ್ಳೆಯದೇ ಆಯಿತು. ಅಂತಹವರನ್ನು ಬೆಳೆಸಿ ನಾವು ರಾಜಕಾರಣ ಮಾಡುವ ಅಗತ್ಯವಿಲ್ಲ. ಯುವಕರು, ಮಹಿಳೆಯರಿಗೆ ಆದ್ಯತೆ ನೀಡುವ ಉದ್ದೇಶದಿಂದ ಕುಸುಮಾ ಅವರನ್ನು ಕಣಕ್ಕಿಳಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.