ಕಾರವಾರ: ‘ಕರಾವಳಿ ಜಿಲ್ಲೆಗಳಿಗೆ ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಿಸಲು ಖರೀದಿಸುವ ಪ್ರತಿ ಕ್ವಿಂಟಲ್ ಭತ್ತಕ್ಕೆ ₹ 500 ಪ್ರೋತ್ಸಾಹ ಧನ ನೀಡಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿ ಕ್ವಿಂಟಲ್ ಭತ್ತಕ್ಕೆ ₹ 2,040 ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಆದರೆ,ಕುಚಲಕ್ಕಿಗೆ ಬಳಸುವ ಭತ್ತವನ್ನು ಕೇರಳ ರಾಜ್ಯದ ಪಡಿತರ ವ್ಯವಸ್ಥೆಯಡಿ ₹ 2,220ರಂತೆ ಖರೀದಿಸಲಾಗುತ್ತಿದೆ. ನಮ್ಮ ರಾಜ್ಯದ ಹಲವು ರೈತರು ಆ ರಾಜ್ಯಕ್ಕೆ ಭತ್ತ ಮಾರಾಟ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಕುಚಲಕ್ಕಿಯ ಭತ್ತಕ್ಕೆ ಸೀಮಿತವಾಗಿ ₹ 500 ಪ್ರೋತ್ಸಾಹ ಧನ ನೀಡಿ ಒಟ್ಟು ₹ 2,540ರಂತೆ ಖರೀದಿಸಲಾಗುವುದು. ಖರೀದಿ ಕೇಂದ್ರಗಳನ್ನು ಶೀಘ್ರವೇ ಆರಂಭಿಸಲಾಗುತ್ತದೆ. ಆದ್ದರಿಂದ ರೈತರು ತರಾತುರಿಯಲ್ಲಿ ಭತ್ತ ಮಾರಾಟ ಮಾಡಬಾರದು’ ಎಂದು ಮನವಿ ಮಾಡಿದರು.
‘ದಕ್ಷಿಣ ಕನ್ನಡ, ಉಡುಪಿ ಹಾಗೂ ಭಾಗಶಃ ಉತ್ತರ ಕನ್ನಡಕ್ಕೆ ಕುಚಲಕ್ಕಿ ವಿತರಿಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಇದಕ್ಕೆ ಪ್ರತಿ ತಿಂಗಳಿಗೆ 1 ಲಕ್ಷ ಕ್ವಿಂಟಲ್ ಅಕ್ಕಿ ಬೇಕಾಗುತ್ತದೆ. ರಾಜ್ಯದ ಯಾವುದೇ ಜಿಲ್ಲೆಯಿಂದಾದರೂ ಅಕ್ಕಿಯನ್ನು ಖರೀದಿಸಿ ಆಯಾ ಜಿಲ್ಲೆಗಳಲ್ಲೇ ಸಂಸ್ಕರಿಸಿ ವಿತರಿಸುವಂತೆ ಕೇಂದ್ರ ಸರ್ಕಾರವೂ ನಿರ್ದೇಶನ ನೀಡಿದೆ’ ಎಂದು ಹೇಳಿದರು.
‘ಅಲ್ಲದೇ, ಕುಚಲಕ್ಕಿ ವಿತರಣೆ ಯೋಜನೆಗೆ ₹ 132 ಕೋಟಿ ಮಂಜೂರು ಮಾಡುವಂತೆ ಸಿ.ಎಂಗೆ ಮನವಿ ಮಾಡಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.