
ಬೆಂಗಳೂರು: ‘ಆರ್ಎಸ್ಎಸ್ ಆದಾಯ ತೆರಿಗೆ ತಪ್ಪಿಸಿಕೊಳ್ಳುತ್ತಿರುವುದು ಏಕೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ತಾನು ನೋಂದಾಯಿತ ಸಂಸ್ಥೆಯಲ್ಲ ಎಂದು ಆರ್ಎಸ್ಎಸ್ ಲಿಖಿತವಾಗಿ ತಿಳಿಸಿದೆ. ಆರ್ಎಸ್ಎಸ್ ನಿಸ್ವಾರ್ಥದಿಂದ ದೇಶಸೇವೆ ಮಾಡುತ್ತಿರುವುದು ನಿಜವೇ ಆಗಿದ್ದರೆ, ಇತರ ಎಲ್ಲ ಎನ್ಜಿಒಗಳಂತೆ ಪಾರದರ್ಶಕವಾಗಿ ಹಾಗೂ ಕಾನೂನುಬದ್ಧವಾಗಿ ಏಕೆ ನೋಂದಾಯಿಸಿಕೊಳ್ಳಬಾರದು’ ಎಂದು ಸವಾಲು ಹಾಕಿದ್ದಾರೆ.
‘ಆರ್ಎಸ್ಎಸ್ಗೆ ದೇಣಿಗೆ ನೀಡುವವರು ಯಾರು? ದೇಣಿಗೆ ಎಲ್ಲಿಂದ ಬರುತ್ತದೆ? ನೋಂದಣಿ ಇಲ್ಲದ ಸಂಘಟನೆ ಎಂದ ಮೇಲೆ ಲೆಕ್ಕಪತ್ರ ಪರಿಶೀಲನೆ ಮತ್ತು ತೆರಿಗೆ ಪಾವತಿಯ ಪ್ರಶ್ನೆಯೇ ಇರುವುದಿಲ್ಲ. ಹೀಗೆ ದೇಶಸೇವೆ ಎಂದು ಹೇಳುತ್ತಾ ಪರಿಶೀಲನೆ ಮತ್ತು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುತ್ತಿರುವುದು ಏಕೆ? ಹೀಗೆ ತೆರಿಗೆ ತಪ್ಪಿಸುವವರು ದೇಶಭಕ್ತರು ಹೇಗಾಗುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.
‘ದೇಶದ ಪ್ರಧಾನಿ ಮತ್ತು ಗೃಹ ಸಚಿವರಿಗೆ ನೀಡಿರುವಷ್ಟೇ ಭದ್ರತೆಯನ್ನು ಆರ್ಎಸ್ಎಸ್ನ ಮುಖ್ಯಸ್ಥರಿಗೂ ನೀಡಲಾಗಿದೆ. ನೋಂದಣಿ ಮಾಡಿಕೊಳ್ಳದ ಸಂಸ್ಥೆಯ ಮುಖ್ಯಸ್ಥರ ಭದ್ರತೆಗಾಗಿ ದೇಶದ ಜನರ ತೆರಿಗೆ ಹಣವನ್ನು ಖರ್ಚು ಮಾಡುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನೆಯೊಂದಕ್ಕೆ ಮರುಪ್ರಶ್ನೆ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.