ADVERTISEMENT

ಸಾಂಗ್ಲಿ ಪ್ರವಾಹಕ್ಕೆ ಮಹಾರಾಷ್ಟ್ರವೇ ಹೊಣೆ: ಸಚಿವ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 14:46 IST
Last Updated 3 ಆಗಸ್ಟ್ 2025, 14:46 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ‘ಮಹಾರಾಷ್ಟ್ರ ಸರ್ಕಾರವು ಕೊಯ್ನಾ, ರಾಜಾಪುರ ಅಣೆಕಟ್ಟೆಗಳಿಂದ ದಿಢೀರ್ ಎಂದು ಅಪಾರ ಪ್ರಮಾಣದ ನೀರು ಹೊರಬಿಡುವುದರಿಂದಲೇ ಸಾಂಗ್ಲಿ, ಸತಾರಾ, ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರವಾಹ ತಲೆದೋರುತ್ತದೆ ಎಂದು ಅಲ್ಲಿನ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯೇ ಹೇಳಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಹಾರಾಷ್ಟ್ರದ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ನಂದಕುಮಾರ್‌ ವಡ್ನೇರೆ ಅವರು ಸಲ್ಲಿಸಿದ್ದ ತಜ್ಞರ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

‘ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಸೇರಿದಂತೆ ಹಲವೆಡೆಗಳಲ್ಲಿ 2019ರಲ್ಲಿ ಪ್ರವಾಹ ಉಂಟಾಗಿತ್ತು. ಭವಿಷ್ಯದಲ್ಲಿ ಪ್ರವಾಹವನ್ನು ತಡೆಯಲು ಏನು ಮಾಡಬೇಕೆಂದು ಸೂಚಿಸುವಂತೆ ತಿಳಿಸಿ ಮಹಾರಾಷ್ಟ್ರ ಸರ್ಕಾರವು ವಡ್ನೇರೆ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿತ್ತು. 2020ರಲ್ಲಿ ಸಮಿತಿಯು ವರದಿ ಸಲ್ಲಿಸಿತ್ತು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಸಾಂಗ್ಲಿ ಮತ್ತು ಕೊಲ್ಹಾ‍ಪುರದಲ್ಲಿ ಪ್ರವಾಹ ಉಂಟಾಗಲು ಕರ್ನಾಟಕದ ಆಲಮಟ್ಟಿ ಮತ್ತು ಹಿಪ್ಪರಗಿ ಜಲಾಶಯಗಳ ಹಿನ್ನೀರು ಕಾರಣವಲ್ಲ. ಈ ಎರಡೂ ಅಣೆಕಟ್ಟುಗಳ ಹಿನ್ನೀರು ಕರ್ನಾಟಕದೊಳಗೆ ನಿಲ್ಲುತ್ತವೆ. ಮಹಾರಾಷ್ಟ್ರದ ಭೂಪ್ರದೇಶ ಮುಳುಗಡೆ ಆಗುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ’ ಎಂದಿದ್ದಾರೆ.

‘ಕೊಯ್ನಾ ಅಣೆಕಟ್ಟೆ, ರಾಜಾಪುರ ಬ್ಯಾರೇಜ್‌ಗಳಿಂದ ಹಂತಹಂತವಾಗಿ ನೀರು ಬಿಡದೆ, ಸಂಪೂರ್ಣ ತುಂಬಿದ ಬಳಿಕ ಒಂದೇ ಸಲ ಲಕ್ಷಾಂತರ ಕ್ಯೂಸೆಕ್‌ ನೀರನ್ನು ನದಿ ಪಾತ್ರಕ್ಕೆ ಬಿಡುವುದರಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ವರದಿಯಲ್ಲಿ ಮಹಾರಾಷ್ಟ್ರ ಸರ್ಕಾರದತ್ತಲೇ ಬೊಟ್ಟು ಮಾಡಲಾಗಿದೆ’ ಎಂದು ವಿವರಿಸಿದ್ದಾರೆ.

ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸುವುದರಿಂದ ಮಹಾರಾಷ್ಟ್ರಕ್ಕೆ ತೊಂದರೆಯಾಗುವುದಿಲ್ಲ. ಆದರೆ ದೇವೇಂದ್ರ ಫಡಣವೀಸ್‌ ಅವರು ಕರ್ನಾಟಕದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ.
-ಎಂ.ಬಿ.ಪಾಟೀಲ, ಕೈಗಾರಿಕಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.