ADVERTISEMENT

ಬಡ್ತಿಯಲ್ಲಿ ಮೀಸಲಾತಿ: ಸುಪ್ರೀಂ ತೀರ್ಪು ಪ್ರಶ್ನಿಸಿ ಪುನರ್‌ಪರಿಶೀಲನಾ ಅರ್ಜಿ

​ಪ್ರಜಾವಾಣಿ ವಾರ್ತೆ
Published 10 ಮೇ 2019, 10:47 IST
Last Updated 10 ಮೇ 2019, 10:47 IST
   

ಬೆಂಗಳೂರು: ಬಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ಅಹಿಂಸಾ ಒಕ್ಕೂಟದ ಅಧ್ಯಕ್ಷ ಎಂ.ನಾಗರಾಜ್‌ ತಿಳಿಸಿದರು.

ಸುಪ್ರೀಂಕೋರ್ಟ್‌ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ತೀರ್ಪು ತಪ್ಪಿನಿಂದ ಕೂಡಿದೆ ಮತ್ತು ಅಹಿಂಸಾ ವರ್ಗಕ್ಕೆ ದೊಡ್ಡ ಅನ್ಯಾಯವಾಗಿದೆ. ಈ ಬಗ್ಗೆ ಸ್ಪಷ್ಟನೆಯನ್ನು ಕೋರಲು ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸುವುದು ಒಕ್ಕೂಟದ ತೀರ್ಮಾನ ಎಂದರು.

ಅಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ನಾಗರಾಜ್‌ ತಿಳಿಸಿದರು.

ADVERTISEMENT

‘ನಮ್ಮ ಒಕ್ಕೂಟ ಬಡ್ತಿಯಲ್ಲಿ ಮೀಸಲಾತಿಗೆ ವಿರುದ್ಧ ಇಲ್ಲ. ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿ ಶೇ 18 ಪ್ರಕಾರವೇ ನೀಡಲಿ. ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಮೀಸಲಾತಿ ಪ್ರಮಾಣವನ್ನು ಮೀರಿ ಎಲ್ಲ ಹುದ್ದೆಗಳಿಗೂ ಬಡ್ತಿ ಮೀಸಲಾತಿ ನೀಡುವುದರಿಂದ ಉಳಿದ ವರ್ಗಕ್ಕೆ ಅನ್ಯಾಯವಾಗುತ್ತಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಈ ಅನ್ಯಾಯ ಮುಂದುವರಿಯಲಿದೆ’ ಎಂದು ನಾಗರಾಜ್‌ ಹೇಳಿದರು.

ಯಾವುದೇ ಇಲಾಖೆಯಲ್ಲಿ 100 ಹುದ್ದೆಗಳಿಗೆ ಬಡ್ತಿ ನೀಡುವಾಗ ಶೇ 18 ರಷ್ಟು ಹುದ್ದೆಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ನೀಡಲಿ. ಅದನ್ನು ಬಿಟ್ಟು ಸರ್ಕಾರ ಎಲ್ಲ ಹುದ್ದೆಗಳಿಗೂ(ಶೇ 82) ಬಡ್ತಿಯಲ್ಲಿ ಮೀಸಲಾತಿ ನೀಡಲು ಹೊರಟಿರುವುದು ತಪ್ಪು. ಶೇ 18 ವರ್ಗದ ಜನರ ಕಣ್ಣಿಗೆ ಬೆಣ್ಣೆ ಮತ್ತು ಶೇ 82 ರ ವರ್ಗದವರ ಕಣ್ಣಿಗೆ ಸುಣ್ಣ ಎಂಬ ಸರ್ಕಾರದ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ. ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗಕ್ಕೆ ಬಡ್ತಿಯಲ್ಲಿ ನ್ಯಾಯ ಕೊಡಬೇಡಿ ಎಂದು ಸಂವಿಧಾನವೂ ಹೇಳಿಲ್ಲ. ಆದ್ದರಿಂದ, ಮಹಾತ್ಮ ಗಾಂಧಿ ಹೇಳಿಕೊಟ್ಟಿರುವ ಅಹಿಂಸಾತ್ಮಕ ಹೋರಾಟ ನಡೆಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.