ADVERTISEMENT

ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸಹಕಾರಿಗಳಿಗೆ ‘ಇಸ್ರೇಲ್ ಪ್ರವಾಸ’

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 20:03 IST
Last Updated 16 ಜೂನ್ 2019, 20:03 IST

ಮಂಗಳೂರು: ‘ರಾಜ್ಯದ ರೈತರನ್ನು ಸತತವಾಗಿ ಕಾಡುತ್ತಿರುವ ಬರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಡಿಮೆ ನೀರು, ಜಮೀನು ಹಾಗೂ ಬಂಡವಾಳದಲ್ಲಿ ಹೆಚ್ಚಿನ ಕೃಷಿ ಉತ್ಪಾದನೆ ಮಾಡುವ ಕುರಿತು ಅಧ್ಯಯನ ನಡೆಸಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 26 ಜನರ ತಂಡವನ್ನು ಇಸ್ರೇಲ್‌ ಪ್ರವಾಸಕ್ಕೆ ಕಳುಹಿಸಿಕೊಡಲಾಗುವುದು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ಬ್ಯಾಂಕ್ ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್ ತಿಳಿಸಿದರು.

‘ಇದೇ 20ರಂದು ಮಂಗಳೂರಿನಿಂದ ಮುಂಬೈ ಮೂಲಕ ಇಸ್ರೇಲ್‌ಗೆ ತೆರಳಲಿರುವ ತಂಡವು, ಅಲ್ಲಿ ಆರು ದಿನಗಳ ಕಾಲ ಕೃಷಿ, ಹೈನುಗಾರಿಕೆ, ಮಾರುಕಟ್ಟೆ, ನೀರಾವರಿ ಕುರಿತು ಅಧ್ಯಯನ ಮಾಡಲಿದೆ. ತಂಡದ ಪ್ರವಾಸದ ವೆಚ್ಚವನ್ನು ಬ್ಯಾಂಕ್ ಭರಿಸಲಿದೆ’ ಎಂದು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಹಕಾರಿ ಬ್ಯಾಂಕೊಂದು ತನ್ನ ಪ್ರತಿನಿಧಿಗಳ ತಂಡವನ್ನು ಕೃಷಿ ಅಧ್ಯಯನಕ್ಕಾಗಿ ವಿದೇಶಕ್ಕೆ ಕಳುಹಿಸುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು. ಈ ತಂಡವು ನೀಡುವ ವರದಿಯ ಸಾಧಕ–ಬಾಧಕಗಳನ್ನು ಆಧರಿಸಿಕೊಂಡು ಮುಂದಿನ ತಂಡವನ್ನು ಕಳುಹಿಸುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.