ADVERTISEMENT

ಜನರನ್ನು ಬೆಪ್ಪು ಮಾಡುವ ‘ಸಿಂಗಂ’, ‘ಸಿಂಹಿಣಿ’ ಬಗ್ಗೆ ಎಚ್ಚರ ಇರಲಿ: ರವಿಕಾಂತೇಗೌಡ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 9:26 IST
Last Updated 8 ಜೂನ್ 2021, 9:26 IST
ಬಿ.ಆರ್. ರವಿಕಾಂತೇಗೌಡ
ಬಿ.ಆರ್. ರವಿಕಾಂತೇಗೌಡ   

ಬೆಂಗಳೂರು: ಐಎಎಸ್, ಐಪಿಎಸ್ ಹಾಗೂ ಇತರೆ ಉನ್ನತ ಹುದ್ದೆಯಲ್ಲಿರುವ ಕೆಲ ಅಧಿಕಾರಿಗಳು, ‘ಸಿಂಗಂ’ ಹಾಗೂ ‘ಸಿಂಹಿಣಿ’ ಎಂಬ ಬಿರುದು ಪಡೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳುತ್ತಿದ್ದಾರೆ. ಜನರನ್ನು ಬೆಪ್ಪು ಮಾಡುತ್ತಿರುವ ಇಂಥ ಬೆಳವಣಿಗೆ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸ್ ಹಿರಿಯ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಕಿವಿಮಾತು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್ ರವಿಕಾಂತೇಗೌಡ, ‘ಕಪ್ಪು-ಬಿಳುಪು ಚಿತ್ರಗಳ ಮೂಲಕ ಜನರನ್ನು ಬೆಪ್ಪು ಮಾಡುವ ಅಪಾಯಕಾರಿ ಅಧಿಕಾರಿಗಳಿಗೆ ಲಿಂಗ ಬೇಧವಿಲ್ಲ. ಈ ವಿಷಯದಲ್ಲಿ ನಾವೆಲ್ಲರೂ ಎಚ್ಚರದಿಂದ ಇರುವುದು ಒಳಿತು’ ಎಂದಿದ್ದಾರೆ.

‘ಅಧಿಕಾರಿಶಾಹಿ, ಬ್ರಿಟಿಷಶಾಹಿ ಮನೋಭಾವದಿಂದ ಆಚೆ ಬಾರದೆ ವಿಜೃಂಭಿಸುತ್ತಿರುವುದು ಹಾಗೂ ಸಾರ್ವಜನಿಕ ಹಣವನ್ನು ದುಂದು ಮಾಡಿದರೂ ಕೆಲವರು ಭೇಷ್ ಎನಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಒಬ್ಬ ಅಧಿಕಾರಿಯಾಗಿ ನಿಮ್ಮೊಂದಿಗೆ ಈ ಮಾತು ಹಂಚಿಕೊಳ್ಳುತ್ತಿದ್ದೇನೆ. ಕಳೆದ ದಶಕದಲ್ಲಿ ಆದ ಒಂದು ಬೆಳವಣಿಗೆಯನ್ನು ನಾವೆಲ್ಲ ಗಮನಿಸಬೇಕು. ತಂತ್ರಜ್ಞಾನದ ಅರಿವುಳ್ಳವರು ಅಧಿಕಾರಶಾಹಿಯಲ್ಲಿ ಹೆಚ್ಚಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣ ಮೂಲಕ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳಲು, ತಾವಷ್ಟೇ ಪ್ರಾಮಾಣಿಕರು ಎಂಬುದಾಗಿಯೂ ತಾವು ಸಿಂಗಂ, ಸಿಂಹಿಣಿಯರೆಂದೂ ಬಿಂಬಿಸಿಕೊಳ್ಳಲು ಪ್ರಾರಂಭಿಸಿದರು.

‘ಕೆಲವರು, ತಮ್ಮದೇ ಅಭಿಮಾನಿಗಳ ಫೇಸ್‌ಬುಕ್‌ ಪುಟಗಳನ್ನು ಆರಂಭಿಸಿದರು. ತಾವು ಮಾಡಬೇಕಾದ ಕೆಲಸಗಳನ್ನು ತಮ್ಮ ಹೊಣೆಗಾರಿಕೆಯೆಂದು ಭಾವಿಸದೆ, ತಮ್ಮ ವಿಶಿಷ್ಟತೆಯೆಂದು ಪ್ರಚಾರಕ್ಕಿಳಿದರು. ಆಡಳಿತದ ಹೊರವಲಯದಲ್ಲಿರುವ ಮುಗ್ಧ ಜನರಲ್ಲಿ ತಾವು ಅವರ ಉದ್ಧಾರಕ್ಕೆ ಬಂದ ಅವತಾರ ಪುರುಷರೆಂದು ನಂಬಿಸತೊಡಗಿದರು. ಇವರಿಂದ ಸ್ಫೂರ್ತಿ ಪಡೆದಂತಹ ಸಿನೆಮಾಗಳು ಬಂದು ಹೀರೋಗಳಾಗಿ ವಿಜೃಂಭಿಸಿದರು. ಅಸಲಿಗೆ, ಇಂಥ ಅಧಿಕಾರಿಗಳ ಅವತಾರಗಳನ್ನು ಅವರ ಒಳ–ಹೊರಗು ಬಲ್ಲವರು ಕಂಡು ಹೇಸುತ್ತಾರೆ’ ಎಂದೂ ರವಿಕಾಂತೇಗೌಡ ಅಭಿಪ್ರಾಯಪಟ್ಟಿದ್ದಾರೆ.

‘ಉದಾಹರಣೆಗೆ ಈಶಾನ್ಯ ರಾಜ್ಯದಿಂದ ಬಂದಿದ್ದ ಒಬ್ಬ ಐಪಿಎಸ್ ಅಧಿಕಾರಿಯ ಬಗ್ಗೆ ಹಬ್ಬಿದ್ದ ರೋಚಕ ಕತೆಗಳು ಹಾಗೂ ಸಾಹಸಗಳು ನಿಜವೆಂದು ನಾನು ನಂಬಿದ್ದೆ, ನಾನು ಇಲಾಖೆಗೆ ಬಂದು ಆತನ ಅವತಾರಗಳನ್ನು ಕಂಡು ಗಾಬರಿಯಾದೆ. ಪ್ರಾಮಾಣಿಕರು, ದಕ್ಷರು ಸದ್ದಿಲ್ಲದೆ ಕೆಲಸ ಮಾಡುವುದನ್ನೂ ಕಂಡೆ.’

‘ಅಧಿಕಾರಿಗಳಿಗೆ ಪ್ರಾಮಾಣಿಕತೆ ಹಾಗೂ ದಕ್ಷತೆಯಷ್ಟೇ ಅನಾಮಿಕತೆಯು ಮುಖ್ಯವಾದದ್ದು. ಕೆಲಸ ಯಶಸ್ವಿಯಾದಾಗ ಆ ಗೆಲುವು ಇಡೀ ತಂಡಕ್ಕೆ ನೀಡುವುದು ಮುಖ್ಯ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT