ತುಮಕೂರು: ಸಿದ್ದರಾಮಯ್ಯ ಅವರು ಧರ್ಮ ಒಡೆಯಲು ಪ್ರಯತ್ನಿಸಿ ವಿಫಲರಾದರು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಅವರು ಹೇಳಿದರು.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಹೇರೂರಿನಲ್ಲಿ ವೀರಶೈವ ಮಹಾಸಭಾ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಲಿಂಗಾಯತ ಧರ್ಮ ಹಿಂದೂ ಧರ್ಮದಲ್ಲಿ ಇಲ್ಲ ಎಂದು ಹೇಳಲು ಸಿದ್ದರಾಮಯ್ಯ ಅವರೇನು ಲಿಂಗಾಯಿತರಾ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಧರ್ಮದ ಕುರಿತು ಸಿದ್ದರಾಮಯ್ಯ ಮತ್ತೆ ಹೇಳಿಕೆ ನೀಡಿದ್ದಾರೆ, ಈ ಕುರಿತು ನಿಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮ ಪ್ರತಿನಿಧಿಗಳು ಒತ್ತಾಯಿಸಿದಾಗ, ಧರ್ಮ ಒಡೆಯುವ ಪ್ರಯತ್ನ ಈಗ ಮುಗಿದ ಅಧ್ಯಾಯ. ಅದನ್ನು ನೀವು ಮತ್ತೆ ಹುಟ್ಟುಹಾಕಬೇಡಿ. ವೀರಶೈವ–ಲಿಂಗಾಯಿತರು ಒಂದೇ ನಾಣ್ಯದ ಎರಡು ಮುಖ ಎಂದು ನಮ್ಮ ಸಮುದಾಯ ಬದುಕುತ್ತಿದೆ. ಇದನ್ನೆ ಅನುಸರಿಸುತ್ತಿದ್ದೇವೆ ಎಂದು ಉತ್ತರಿಸಿದರು.
ನಮ್ಮಲ್ಲಿ ಪಂಗಡಗಳು ಇಲ್ಲ. ನಾವು ಸಂಘಟಿತರಾಗಲು ಅನಿವಾರ್ಯತೆ ಎದುರಾಗಿದೆ. ರಾಜಕೀಯ ದುರುದ್ದೇಶಕ್ಕೆ ಧರ್ಮ ಒಡೆಯಲು ಪ್ರಯತ್ನಿಸಲಾಯಿತು. ಇದನ್ನು ಅರಿತು ಎಲ್ಲರು ಒಟ್ಟಾಗಿ ಧರ್ಮದ ಉದ್ಧಾರಕ್ಕೆ ಶ್ರಮಿಸಬೇಕಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.