ADVERTISEMENT

ಶಿರಾಡಿಘಾಟ್‌ ರಸ್ತೆ ಮೇಲ್ದರ್ಜೆಗೆ: ಕೇಂದ್ರ ಒಪ್ಪಿಗೆ- ಸಿಎಂ ಬೊಮ್ಮಾಯಿ ಮಾಹಿತಿ

₹1,200 ಕೋಟಿ ವೆಚ್ಚದ ಯೋಜನೆ* ಎರಡು ವರ್ಷದಲ್ಲಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 18:31 IST
Last Updated 20 ಜನವರಿ 2022, 18:31 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಶಿರಾಡಿ ಘಾಟ್ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಬೇಕೆಂಬಕರ್ನಾಟಕದ ಬಹುವರ್ಷಗಳ ಬೇಡಿಕೆ ಕೈಗೂಡುವ ಕಾಲ ಸನ್ನಿಹಿತವಾಗಿದೆ.

ಬೆಂಗಳೂರು–ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಶಿರಾಡಿ ಘಾಟ್ ಸದ್ಯ ದ್ವಿಪಥ ರಸ್ತೆಯಾಗಿದೆ.

ಇದನ್ನು ₹1200 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ADVERTISEMENT

ಶಿರಾಡಿ ಘಾಟ್ ಮೂಲಕ ಆರು ಪಥಗಳ ಸುರಂಗ ಮಾರ್ಗ ನಿರ್ಮಿಸುವ ಬಗ್ಗೆ ಅಧ್ಯಯನ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಗಡ್ಕರಿ ಸೂಚಿಸಿದ್ದಾರೆ. ಎನ್‌ಎಚ್‌ಎಐ ರಸ್ತೆ ಕಾಮಗಾರಿ ನಿರ್ವಹಿಸಲಿದ್ದು, ಎರಡು ವರ್ಷಗಳ ಅವಧಿಯಲ್ಲಿಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನೂ ಕೇಂದ್ರ ಸಚಿವರು ನೀಡಿದ್ದಾರೆ. ಈ ಯೋಜನೆಗೆ ಅಗತ್ಯ ಇರುವ ಎಲ್ಲ ಅನುಮೋದನೆ ಹಾಗೂ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಶಿರಾಡಿ ಘಾಟ್ ಕಿರಿದಾಗಿರುವುದರಿಂದ ಹಾಗೂ ಮಳೆಗಾಲದಲ್ಲಿ ಪದೇ ಪದೇ ಹಾಳಾಗುವುದರಿಂದ ಈ ರಸ್ತೆಯಲ್ಲಿ ಓಡಾಡುವುದೇ ದುಸ್ತರ ಎಂಬಂತಾಗಿದೆ. ಈ ಯೋಜನೆ ಪೂರ್ಣಗೊಂಡರೆ ಬೆಂಗಳೂರಿನಿಂದ ಮಂಗಳೂರುವರೆಗಿನ ರಸ್ತೆ ಏಕ ರೀತಿಯಲ್ಲಿ ನಾಲ್ಕು ಪಥದ ರಸ್ತೆಯಾಗಲಿದೆ. ಪರಿಸರ ಹಾಗೂ ಆರ್ಥಿಕ ದೃಷ್ಟಿಯಿಂದ ಸುಸ್ಥಿರ ರೀತಿಯಲ್ಲಿ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸುವುದರಿಂದ ಈ ರಸ್ತೆ ಹಾದುಹೋಗುವ ಉದ್ದಕ್ಕೂ ಆರ್ಥಿಕ ಚೇತರಿಕೆಗೆ ನೆರವು ಸಿಗಲಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಶಿರಾಡಿ ಘಾಟ್ ರಸ್ತೆ ರಾಜ್ಯದ ಜೀವನಾಡಿ. ಇದನ್ನು ನಾಲ್ಕು ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ ನೀಡಿರುವ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದಗಳು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.