ADVERTISEMENT

ಅಲ್ಪಾವಧಿ ಬೆಳೆ ಬಿತ್ತನೆ ಬೀಜ ಪೂರೈಕೆ: ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2023, 15:58 IST
Last Updated 28 ಜುಲೈ 2023, 15:58 IST
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ   

ಬೆಂಗಳೂರು: ರಾಜ್ಯದಲ್ಲಿ ತಡವಾಗಿ ಮಳೆಯಾಗುತ್ತಿರುವುದರಿಂದ ರೈತರಿಗೆ ಅಲ್ಪಾವಧಿ ಬೆಳೆಗಳ ಬಿತ್ತನೆ ಬೀಜ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, ದ್ವಿದಳ ಧಾನ್ಯ ಬಿತ್ತನೆ ಸಮಯ ಮೀರಿದೆ. ಆದ್ದರಿಂದ ಅಲ್ಪಾವಧಿಯಲ್ಲಿ ಬೆಳೆಯುವ ರಾಗಿ, ಹುರುಳಿ, ಜೋಳ ಸೇರಿದಂತೆ ಅಗತ್ಯ ಬಿತ್ತನೆ ಬೀಜ ಪೂರೈಸಲು ತೀರ್ಮಾನಿಸಲಾಗಿದೆ ಎಂದರು.

ಸದ್ಯಕ್ಕೆ 14 ಲಕ್ಷ ಟನ್‌ ರಸಗೊಬ್ಬರ ಮತ್ತು 1 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನಿದೆ. ಯಾವುದೇ ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಇದ್ದರೆ ನೆರೆಯ ಜಿಲ್ಲೆಯಿಂದ ಪೂರೈಕೆ ಮಾಡಲು ಅಧಿಕಾರಿಗಳಿಗೆ ಆದೇಶ ಮಾಡಲಾಗಿದೆ ಎಂದರು.

ADVERTISEMENT

ಮಳೆ ಕೊರತೆಯಿಂದ ಶೇ 53 ರಷ್ಟು ಮಾತ್ರ ಬಿತ್ತನೆಯಾಗಿದೆ. ಒಟ್ಟಾರೆ 82 ಲಕ್ಷ ಹೆಕ್ಟೇರ್‌ ಪ್ರದೇಶದ ಪೈಕಿ 43 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಮುಂದಿನ 15 ದಿನಗಳಲ್ಲಿ ಶೇ 100 ರಷ್ಟು ಬಿತ್ತನೆಯಾಗಲಿದೆ ಎಂದರು.

ರೈತರು ಬಿತ್ತನೆ ಬೀಜವನ್ನು ರೈತ ಕೇಂದ್ರ ಇಲ್ಲವೇ ಇಲಾಖೆಯಿಂದ ಪಡೆಯಬಹುದಾಗಿದೆ. ಇಲಾಖೆಗೆ ಹೊರೆಯಾಗಿದ್ದ ಮೈಕ್ರೋ ಇರಿಗೇಷನ್‌ ಮತ್ತು ಕರ್ನಾಟಕ ಆಗ್ರೋ ಇಂಡಸ್ಟ್ರಿ ಕಾರ್ಪೊರೇಷನ್‌ ಮುಚ್ಚಲು ತೀರ್ಮಾನಿಸಲಾಗಿದೆ. ಹನಿ ಮತ್ತು ತುಂತುರು ನೀರಾವರಿ ಕಾರ್ಯವನ್ನು ತೋಟಗಾರಿಕೆ ಇಲಾಖೆ ನಿರ್ವಹಿಸಲಿದೆ. ಇವೆರಡನ್ನೂ ಮುಚ್ಚಿ ಅಲ್ಲಿರುವ ನೌಕರರನ್ನು ಇಲಾಖೆಯಲ್ಲಿ ವಿಲೀನ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಕೃಷಿ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ₹167 ಕೋಟಿ ವೆಚ್ಚದ 37 ಕಾಮಗಾರಿಗಳು ನಡೆಯುತ್ತಿವೆ. ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳ ಗುಣಮಟ್ಟ ಪರಿಶೀಲಿಸುವಂತೆ ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.