ADVERTISEMENT

ಸಿದ್ದರಾಮಯ್ಯ ವಿರುದ್ದ ಪ್ರತಿಭಟನೆ: ಸರ್ಕಾರಿ ಪ್ರಾಯೋಜಿತ ಗಲಭೆ ಎಂದ ಗುಂಡೂರಾವ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಆಗಸ್ಟ್ 2022, 12:44 IST
Last Updated 18 ಆಗಸ್ಟ್ 2022, 12:44 IST
   

ಬೆಂಗಳೂರು: ಮಡಿಕೇರಿಯಲ್ಲಿ ಸಿದ್ದರಾಮಯ್ಯ ವಿರುದ್ಧ ನಡೆದ ಪ್ರತಿಭಟನೆಯು ಸರ್ಕಾರಿ ಪ್ರಾಯೋಜಿತ ಗಲಭೆ ಎಂದು ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ವಾಗ್ದಾಳಿ ನಡೆಸಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಅವರು, ‘ಮಡಿಕೇರಿ ಭೇಟಿಗೆ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ಯುವ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದಿರುವುದು ಹೇಡಿಗಳ ಲಕ್ಷಣ‘ ಎಂದು ಕಿಡಿಕಾರಿದ್ದಾರೆ.

‘ಈ‌ ಕೃತ್ಯ ಅವರ ಹತಾಶೆ ತೋರಿಸುತ್ತಿದೆ. ಸಿದ್ದರಾಮಯ್ಯರವರನ್ನು ಸೈದಾಂತಿಕವಾಗಿ ಎದುರಿಸಲಾಗದ ಬಿಜೆಪಿ ಇಂತಹ ಹೀನ ನಡೆ ಪ್ರದರ್ಶಿಸುತ್ತಿದೆ. ಇದೊಂದು ಸರ್ಕಾರಿ ಪ್ರಾಯೋಜಿತ ಗಲಭೆ’ ಎಂದು ಹೇಳಿದ್ದಾರೆ.

‘ಸಿದ್ದಾರಾಮೋತ್ಸವದ ಭರ್ಜರಿ ಯಶಸ್ಸಿನ ಬಳಿಕ ಬಿಜೆಪಿಯವರಿಗೆ ನಡುಕ ಶುರುವಾಗಿದೆ‌. ಹಾಗಾಗಿ, ಸಿದ್ದರಾಮಯ್ಯನವರ ಮೇಲಿನ ಅಸಹನೆಯಿಂದ ಕಾರ್ಯಕರ್ತರನ್ನು ಛೂ ಬಿಟ್ಟು ಘೇರಾವ್ ಹಾಕಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.

ADVERTISEMENT

‘ಬಿಜೆಪಿಯವರ ಈ ಷಡ್ಯಂತ್ರಕ್ಕೆ ಕಾಂಗ್ರೆಸ್ ಆಗಲಿ, ಸಿದ್ದರಾಮಯ್ಯನವರಾಗಲಿ ಸೊಪ್ಪು‌ ಹಾಕುವುದಿಲ್ಲ. ಬಿಜೆಪಿಯವರು ಹೇಡಿಗಳಂತೆ ವರ್ತಿಸುವುದು ಬಿಡಲಿ’ ಎಂದು ತಿಳಿಸಿದ್ದಾರೆ.

ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿ ಮಡಿಕೇರಿಗೆ ಬಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಪ್ಪುಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರು ಕೋಳಿಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಖಂಡಿಸಿದ ಕಾಂಗ್ರೆಸ್ ಕಾರ್ಯಕರ್ತರು ವೃತ್ತದ ಮತ್ತೊಂದು ಪಾರ್ಶ್ವದಲ್ಲಿ ಪ್ರತಿಭಟನೆ ಕುಳಿತರು.‌ ಸುಮಾರು ಅರ್ಧಗಂಟೆಗಳ ಕಾಲ ಉಭಯ ಕಾರ್ಯಕರ್ತರು ಒಂದೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.