ADVERTISEMENT

ಗೂಂಡಾಗಳನ್ನು ಕಳಿಸಿದ್ದ ಜನಾರ್ದನ ರೆಡ್ಡಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 17:20 IST
Last Updated 23 ಅಕ್ಟೋಬರ್ 2018, 17:20 IST

ಬಳ್ಳಾರಿ: ಲೋಕಸಭೆ ಉಪ ಚುನಾವಣೆ ಪ್ರಚಾರ ತಾರಕಕ್ಕೇ ಏರಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಮುಖಂಡರ ಪರಸ್ಪರ ಆರೋಪ– ಪ್ರತ್ಯಾರೋಪಗಳು ಸಾರ್ವಜನಿಕರಿಗೆ ಮನರಂಜನೆ ಒದಗಿಸುತ್ತಿವೆ.

‘ವಿರೋಧ ಪಕ್ಷದ ನಾಯಕನಾಗಿ ಸಂಡೂರಿಗೆ ಬಂದಿದ್ದಾಗ ಜನಾರ್ದನ ರೆಡ್ಡಿ ಗುಂಪು ಗೂಂಡಾಗಳನ್ನು ಕಳಿಸಿದ್ದರು. ರೆಡ್ಡಿ ಸಹೋದರರಿಗೆ ಹೆದರಿ ಅಧಿಕಾರಿಗಳು ಮತ್ತು ಪೊಲೀಸರು ಕೂಡ ನಮ್ಮ ಜೊತೆ ಬಂದಿರಲಿಲ್ಲ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಂಡೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಮಂಗಳವಾರ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಅಂದು ನಾನು ಸಂಡೂರಿಗೆ ಬಂದಾಗ ಜನ ಜೀವಭಯದಲ್ಲಿದ್ದರು’ ಎಂದರು.

ADVERTISEMENT

‘ನಾನು ಶ್ರೀರಾಮುಲು ಅವರನ್ನು ಬೈದರೆ ಜಾತಿಯನ್ನು ಎತ್ತಿ ಕಟ್ಟುತ್ತಾರೆ. ನಾಯಕ ಸಮುದಾಯಕ್ಕೆ ಬೈದರು ಎನ್ನುತ್ತಾರೆ. ಹಾಗಾದರೆ ಅವರು ನನಗೆ ಬೈದರೆ ಇಡೀ ಕುರುಬರಿಗೆ ಬೈದಂತೆ ಅಲ್ಲ’ ಎಂದು ವ್ಯಂಗ್ಯವಾಡಿದ ಅವರು ‘ಮಿಸ್ಟರ್ ರಾಮುಲು ನಾಯಕ ಜನಾಂಗಕ್ಕೆ ನಿಮ್ಮ ಕೊಡುಗೆ ಏನು’ ಎಂದು ಕೇಳಿದರು.

ಶ್ರೀರಾಮುಲು ಮೇಲು:
ಹೊಸಪೇಟೆಯಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಸುದ್ದಿಗಾರರ ಜತೆ ಮಾತನಾಡಿ, ‘ಶ್ರೀರಾಮುಲು ಅವರಿಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಸಿದ್ದರಾಮಯ್ಯ ಟೀಕಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಹೋಲಿಸಿದರೆ ಶ್ರೀರಾಮುಲು ಸಾವಿರ ಪಾಲು ಮೇಲು’ ಎಂದರು.

‘ಶ್ರೀರಾಮುಲು ಕನ್ನಡ ಪಂಡಿತರಲ್ಲ. ಅವರ ಮಾತಿನಲ್ಲಿ ಬಳ್ಳಾರಿಯ ಸೊಗಡಿದೆ. ಆದರೆ ರಾಹುಲ್‌ ಗಾಂಧಿ ಅವರಿಗೆ ವಿಶ್ವೇಶ್ವರಯ್ಯನವರ ಹೆಸರನ್ನು ಸರಿಯಾಗಿ ಹೇಳುವುದಕ್ಕೂ ಬರಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.