ADVERTISEMENT

ನನಗೆ ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 0:30 IST
Last Updated 20 ಡಿಸೆಂಬರ್ 2025, 0:30 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಳಗಾವಿ: 'ನನಗೆ ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ. ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಮುಂದೆಯೂ ಇರುವುದಿಲ್ಲ. ಹಾಗಂತ ಅಷ್ಟೆಲ್ಲ ತಲೆ ಕೆಡಿಸಿಕೊಂಡು ರಾಜಕೀಯ ಮಾಡಬೇಕಿಲ್ಲ' ಎಂದು ಸಿದ್ದರಾಮಯ್ಯ ಹೇಳಿದರು.

ಉತ್ತರ ಕರ್ನಾಟಕ ಕುರಿತ ಚರ್ಚೆಗೆ ಉತ್ತರ ನೀಡಲು ನಿಂತ ಅವರು, 'ನಿನ್ನೆಯೇ ಉತ್ತರ ನೀಡಬೇಕಿತ್ತು. ನನ್ನ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಸ್ವಲ್ಪ ನಿಶ್ಯಕ್ತನಾಗಿದ್ದೇನೆ' ಎಂದರು.

ADVERTISEMENT

ಮಧ್ಯಪ್ರವೇಶಿಸಿದ ಆರ್. ಅಶೋಕ, 'ನಿಮಗೆ ರಾಜಕೀಯ ಶಕ್ತಿ ಬಂದಂತಿದೆ. ಮುಖದಲ್ಲಿ ಕಳೆ ಕಾಣುತ್ತಿದೆ' ಎಂದು ಹೇಳಿದರು.

ಆಗ ಮುಖ್ಯಮಂತ್ರಿ, 'ರಾಜಕೀಯ ನಿಶ್ಯಕ್ತಿ ಬರಲು ಅವಕಾಶ ಇಲ್ಲವೇ ಇಲ್ಲ. ಶಾರೀರಿಕವಾಗಿ ನಿಶ್ಯಕ್ತಿ ಇರುತ್ತದೆ' ಎಂದರು.

ಬಿಜೆಪಿಯ ವಿ. ಸುನಿಲ್‌ಕುಮಾ‌ರ್, 'ಇತ್ತೀಚೆಗೆ ನೀವು ರಾಜಕೀಯವಾಗಿ ನಿಶ್ಯಕ್ತ ಆಗಿದ್ದೀರಿ ಎನ್ನುವುದು ಚರ್ಚೆಯಾಗುತ್ತಿದೆ' ಎಂದರು. ಮತ್ತೆ ಮುಖ್ಯಮಂತ್ರಿ, 'ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ. ಎಂದಿಗೂ ಬರುವುದಿಲ್ಲ' ಎಂದು ಜೋರಾಗಿಯೇ ಹೇಳಿದರು.

'ಎಲ್ಲರೂ ಅಭಿನಂದನೆ ಹೇಳುವುದನ್ನು ನೋಡಿದರೆ ಐದು ವರ್ಷ ಪೂರ್ಣಗೊಳಿಸುವು ದಿಲ್ಲವೆಂದು ಕಾಣಿಸುತ್ತದೆ' ಎಂದು ಬಿಜೆಪಿ ಉಚ್ಚಾಟಿತ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಕಾಲೆಳೆದರು.

'ನಿಮ್ಮಲ್ಲಿ ಸಂಶಯ ಇರುವುದಕ್ಕೆ ನಿಮ್ಮನ್ನು ಪಾರ್ಟಿಯಿಂದ ಹೊರಹಾಕಿದ್ದಾರೆ. ಅಂತಹ ಸಂಶಯ ಇಟ್ಟುಕೊಳ್ಳಬೇಡಿ' ಎಂದು ಸಿದ್ದರಾಮಯ್ಯ ಹೇಳಿದರು.

‘ನಿಶ್ಯಕ್ತಿ: ಮೀನಿನ ಎಫೆಕ್ಟ್‌’

ಉತ್ತರ ಕರ್ನಾಟಕಕ್ಕೆ ರಾಜ್ಯ ಸರ್ಕಾರ ನೀಡಿರುವ ಅನುದಾನ ಮತ್ತು ಯೋಜನೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡಲು ಆರಂಭಿಸಿದಾಗ ಬಿಜೆಪಿ ಸದಸ್ಯರು ನಿಶ್ಯಕ್ತಿ ಬಗ್ಗೆ ಪ್ರಸ್ತಾಪಿಸಿದರು.

ಬಿಜೆಪಿಯ ಸಿ.ಟಿ.ರವಿ ಅವರು, ‘ಅದು ನಾಟಿ ಕೋಳಿ ಎಫೆಕ್ಟ್‌’ ಎಂದರು. ಬಿಜೆಪಿಯ ಕೇಶವ ಪ್ರಸಾದ್‌, ‘ಇಲ್ಲ. ಅದು ದೆಹಲಿ ಎಫೆಕ್ಟ್‌’ ಎಂದು ಸಿದ್ದರಾಮಯ್ಯ ಅವರ ಕಾಲೆಳೆದರು. ಸಿದ್ದರಾಮಯ್ಯ, ‘ಅದು ದೆಹಲಿ ಎಫೆಕ್ಟೂ ಅಲ್ಲ, ನಾಟಿ ಕೋಳಿ ಎಫೆಕ್ಟೂ ಅಲ್ಲ. ಮೀನಿನ ಎಫೆಕ್ಟ್‌. ಮೊನ್ನೆ ಊಟಕ್ಕೆ ಒಂದು ಕಡೆ ಹೋಗಿದ್ದೆ. ಅಲ್ಲಿ ಮೀನು ತಿಂದಿದ್ದರಿಂದ ಹೀಗಾಯಿತು’ ಎಂದರು. 

ಸಭಾಪತಿ ಬಸವರಾಜ ಹೊರಟ್ಟಿ ಅವರು, ‘ಬೋನ್‌ ಇದ್ದ ಮೀನಾ, ಬೋನ್‌ ಇಲ್ಲದ ಮೀನಾ’ ಎಂದು ಪ್ರಶ್ನಿಸಿದರು. ಆಗ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಅವರು ತಿನ್ನುವುದಿಲ್ಲ. ನೀವು ಬೋನ್‌ ಅಥವಾ ಬೋನ್‌ಲೆಸ್‌ ಅಂದರೆ ಗೊತ್ತಾಗುವುದಿಲ್ಲ. ಆದರೆ ಅಲ್ಲಿ (ಕುರ್ಚಿಯನ್ನು ಉದ್ದೇಶಿಸಿ) ಅಲುಗಾಡುತ್ತಿರಬೇಕಲ್ಲವೇ’ ಎಂದು ಕಾಲೆಳೆದರು.

ಸಿದ್ದರಾಮಯ್ಯ ಅವರು, ‘ನನಗೆ ಸಮುದ್ರದ ಆಹಾರ ಆಗುವುದಿಲ್ಲ ಎನಿಸುತ್ತದೆ. ಆದರೆ ಇಲ್ಲೇನು ಅಲುಗಾಡುತ್ತಿಲ್ಲ. ಎಲ್ಲವೂ ಗಟ್ಟಿಯಾಗಿದೆ. ನೀವು ಎರಡು ಬಾರಿ ಸರ್ಕಾರ ರಚಿಸಿ, ಒಂಬತ್ತು ವರ್ಷದಲ್ಲಿ ಐವರು ಮುಖ್ಯಮಂತ್ರಿಯನ್ನು ಬದಲಿಸಿದಿರಿ. ಅಲುಗಾಡುತ್ತಿರುವುದು ನಿಮ್ಮಲ್ಲಿ, ನಮ್ಮಲ್ಲಲ್ಲ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.