ADVERTISEMENT

ಯಡಿಯೂರಪ್ಪ ಸ್ಥಿತಿ ನೋಡಿದರೆ ಅಯ್ಯೋ ಪಾಪ ಅನ್ಸುತ್ತೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 13:29 IST
Last Updated 30 ಸೆಪ್ಟೆಂಬರ್ 2019, 13:29 IST
ಸಿದ್ದರಾಮಯ್ಯ ಹಾಗೂ ಬಿ.ಎಸ್‌.ಯಡಿಯೂರಪ್ಪ
ಸಿದ್ದರಾಮಯ್ಯ ಹಾಗೂ ಬಿ.ಎಸ್‌.ಯಡಿಯೂರಪ್ಪ    

ರಾಯಚೂರು: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಂತಿ ಮೇಲೆ ಏಕೆ ನಡೆಯುತ್ತೀರಿ? ಮೇಲಿನಿಂದ ಬೀಳಬಹುದು. ತಂತಿ ಮೇಲೆ ನಡಿಯುವುದು ಅನಿವಾರ್ಯವಾದರೆ ರಾಜೀನಾಮೆ ಕೊಡಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ಜಿಲ್ಲೆಯ ನೆರೆಪೀಡಿತ ಗ್ರಾಮಗಳ ಭೇಟಿಗಾಗಿ ಬಂದಿದ್ದ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಯಡಿಯೂರಪ್ಪ ಸ್ಥಿತಿ ನೋಡಿದರೆ ಅಯ್ಯೋ ಪಾಪ ಅನ್ಸುತ್ತೆ. ಕೇಂದ್ರದ ನಾಯಕರೆಲ್ಲ ಸೇರಿ ಯಡಿಯೂರಪ್ಪ ರೆಕ್ಕೆ–ಪುಕ್ಕ ಕತ್ತರಿಸಿದ್ದಾರೆ. ಹೀಗಾಗಿ ಅಶಕ್ತ ಮುಖ್ಯಮಂತ್ರಿಯಾಗಿದ್ದಾರೆ’ ಎಂದರು.

ADVERTISEMENT

‘ನಾವು ದ್ವೇಷದ ರಾಜಕಾರಣ ಮಾಡಿಲ್ಲ. ಸಮಗ್ರ ಕರ್ನಾಟಕ ಪರಿಕಲ್ಪನೆ ಇಟ್ಟುಕೊಂಡು ಅಭಿವೃದ್ಧಿ ಯೋಜನೆ ರೂಪಿಸಿದ್ದೇವೆ. ಆದರೆ ಯಡಿಯೂರಪ್ಪ, ಪಕ್ಷದ ಪರಿಕಲ್ಪನೆಯಡಿ ಅಭಿವೃದ್ಧಿ ರೂಪಿಸುತ್ತಿದ್ದಾರೆ. ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುಕೂಲ ಮಾಡಿಕೊಡಲು ಹೆಚ್ಚಿನ ಅನುದಾನ ಒದಗಿಸಿದ್ದಾರೆ’ ಎಂದು ಟೀಕಿಸಿದರು.

‘ಆನಂದಸಿಂಗ್‌ ಅನುಕೂಲಕ್ಕಾಗಿ ವಿಜಯನಗರ ಜಿಲ್ಲೆ ಮಾಡಲು ಮುಂದಾಗಿದ್ದಾರೆ. ಸದ್ಯ ಬಳ್ಳಾರಿಯಲ್ಲಿ ಹೊಸ ಜಿಲ್ಲೆಯ ಅಗತ್ಯವಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನಸಭೆ ಕ್ಷೇತ್ರಗಳಿದ್ದು, ಬೇಕಿದ್ದರೆ ಅದರಲ್ಲಿ ಹೊಸ ಜಿಲ್ಲೆ ಮಾಡಲಿ’ ಎಂದರು.

‘ಪ್ರವಾಹದಿಂದ ಬೆಳಗಾವಿ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳು ಸಮಸ್ಯೆ ಎದುರಿಸುತ್ತಿವೆ. ಬೆಳಗಾವಿಯಲ್ಲಿಯೆ ಅಧಿವೇಶನ ನಡೆಸುವುದು ಸೂಕ್ತವಾಗಿತ್ತು’ ಎಂದು ಅಭಿಪ್ರಾಯಪಟ್ಟರು.

ಉಪಚುನಾವಣೆ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇರುವುದರಿಂದ ಕೆಲವು ನಾಯಕರು ಕೋಪದಿಂದ ಕೂಡಿದ ಅಭಿಪ್ರಾಯ ಹೊರಹಾಕಿದ್ದಾರೆ. ಇದರಲ್ಲೇನು ತಪ್ಪಿಲ್ಲ. ಆದರೆ, ಉಪಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. 15 ಸ್ಥಾನಗಳನ್ನೂ ಕಾಂಗ್ರೆಸ್‌ ಗೆಲ್ಲಲಿದೆ. ಮೊದಲಿಂದಲೂ ರಾಜ್ಯದಲ್ಲಿ ಆಡಳಿತ ಪಕ್ಷ ಉಪಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಪತನವಾಗಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಿಶ್ಚಿತ’ ಎಂದು ಹೇಳಿದರು.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗೂಗಲ್‌ ಬ್ರಿಡ್ಜ್‌ ಕಂ ಬ್ಯಾರೇಜ್‌ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿನೀಡಿ ಪ್ರವಾಹ ಪೀಡಿತ ಪ್ರದೇಶಗಳ ಕುರಿತು ಮಾಹಿತಿ ಪಡೆದರು. ಸ್ಥಳೀಯ ಮುಖಂಡರು ಇದ್ದರು. ಪ್ರಜಾವಾಣಿ ಚಿತ್ರ: ಶ್ರೀನಿವಾಸ ಇನಾಮದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.