ಬೆಂಗಳೂರು: ಶಾಸಕ ಸ್ಥಾನ ತೊರೆದಿರುವಕಾಂಗ್ರೆಸ್ನ ಬಹುತೇಕರು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬೆಂಬಲಿಗರು ಎಂಬ ವಿಚಾರ ಮೈತ್ರಿ ಪಕ್ಷಗಳ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು ಕಾಂಗ್ರೆಸ್ನ ಹಿರಿಯ ಮುಖಂಡರ ಅಸಮಾಧಾನಕ್ಕೂ ಕಾರಣವಾಗಿದೆ.
ಬುಧವಾರ ರಾಜೀನಾಮೆ ನೀಡಿದ ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್, ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗರು. ಅವರ ಸಹಕಾರದಿಂದಲೇ ನಾಗರಾಜ್ ಅವರಿಗೆ ಸಚಿವ ಸ್ಥಾನ ಲಭ್ಯವಾಗಿತ್ತು. ಸುಧಾಕರ್ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿದ್ದರು.
ಎಸ್.ಟಿ.ಸೋಮಶೇಖರ್ (ಯಶವಂತಪುರ), ಬೈರತಿ ಬಸವರಾಜ್ (ಕೆ.ಆರ್.ಪುರಂ), ಮುನಿರತ್ನ (ರಾಜರಾಜೇಶ್ವರಿ ನಗರ), ಸಿದ್ದರಾಮಯ್ಯ ಅತ್ಯಾಪ್ತರು. ಪಕ್ಷೇತರ ಶಾಸಕ ಆರ್.ಶಂಕರ್ (ರಾಣೆಬೆನ್ನೂರು) ಅವರಿಗೆ ಸಚಿವ ಸ್ಥಾನ ಕೊಡಿಸಿದ್ದರು. ಆನಂದ್ ಸಿಂಗ್ (ವಿಜಯನಗರ) ಅವರನ್ನು ಬಿಜೆಪಿಯಿಂದ ಪಕ್ಷಕ್ಕೆ ಕರೆತಂದಿದ್ದರು. ರಮೇಶ್ ಜಾರಕಿಹೊಳಿ (ಗೋಕಾಕ್) ಸಹ ಒಂದು ಕಾಲದ ಆಪ್ತ ಗೆಳೆಯರು.
ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದ ಶಾಸಕರೇ ರಾಜೀನಾಮೆ ನೀಡುತ್ತಿದ್ದರೂ ತಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಹೈಕಮಾಂಡ್ ಸೂಚನೆ ನೀಡಿದರೂ ಕಾರ್ಯಾಚರಣೆಗೆ ಇಳಿಯಲಿಲ್ಲ ಎಂದು ಮೂಲ ಕಾಂಗ್ರೆಸಿಗರು ಹಾಗೂ ಹಿರಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.