ADVERTISEMENT

ಶಿರಾ ಉಪಚುನಾವಣೆ: ಮನೆ ಬಿಟ್ಟು ಬಾರದ ಜೆಡಿಎಸ್ ನಾಯಕರು

ಶಿರಾ ವಿಧಾನಸಭೆ ಉಪಚುನಾವಣೆ ಸಮರ ಜೋರು: ಗೆಲುವಿನ ಕಾರ್ಯತಂತ್ರ ರೂಪಿಸುತ್ತಿರುವ ಮುಖಂಡರು

ಕೆ.ಜೆ.ಮರಿಯಪ್ಪ
Published 16 ಅಕ್ಟೋಬರ್ 2020, 21:20 IST
Last Updated 16 ಅಕ್ಟೋಬರ್ 2020, 21:20 IST
ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್
ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್   

ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆ ಕಣ ರಂಗೇರಿದ್ದು, ಘಟಾನುಘಟಿ ನಾಯಕರು ಕ್ಷೇತ್ರದ ಮೇಲೆ ಕಣ್ಣಿಟ್ಟು ಗೆಲುವಿನ ತಂತ್ರ ಹೆಣೆಯುತ್ತಿದ್ದು, ಪ್ರಚಾರ ಬಿರುಸು ಪಡೆದುಕೊಂಡಿದೆ. ಆದರೆ ಜೆಡಿಎಸ್ ನಾಯಕರು ಮಾತ್ರ ಮನೆಯಿಂದ ಹೊರ ಬರುತ್ತಿಲ್ಲ.

ಜೆಡಿಎಸ್ ರಾಜ್ಯ ಮಟ್ಟದ ನಾಯಕರು ಬಂದು ಪ್ರಚಾರ ಮಾಡಿ ಹೋಗಿರುವುದನ್ನು ಹೊರತುಪಡಿಸಿದರೆ, ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು ಕ್ಷೇತ್ರದತ್ತ ಮುಖಮಾಡಿಲ್ಲ. ತಮ್ಮ ನಾಯಕರು ಕ್ಷೇತ್ರಕ್ಕೆ ಬಂದಾಗ ‘ಮುಖ ತೋರಿಸಿ’ ವಾಪಸಾದರೆ ಮತ್ತೆ ಕ್ಷೇತ್ರದತ್ತ ಕಾಲಿಡಲು ತಮ್ಮ ನಾಯಕರು ಬರಬೇಕು. ಸ್ಥಳೀಯ ಮಟ್ಟದ ಯಾವೊಬ್ಬ ನಾಯಕರೂ ಚುನಾವಣೆ ಬಗ್ಗೆ ಆಸಕ್ತಿ ವಹಿಸದಿರುವುದು ವರಿಷ್ಠರಿಗೆ ತಲೆನೋವಾಗಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಕ್ಷೇತ್ರದಲ್ಲಿ ಸಭೆ ನಡೆಸಿದ್ದಾರೆ. ಎಚ್.ಡಿ.ದೇವೇಗೌಡ ಅವರು ಸಹ ಚುನಾವಣೆ ಘೋಷಣೆಗೆ ಮುನ್ನ ಬಂದು ಹೋಗಿದ್ದಾರೆ. ಸತ್ಯನಾರಾಯಣ ಪತ್ನಿ, ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮುಖಂಡ ಎಚ್.ಡಿ.ರೇವಣ್ಣ ನಾಮಪತ್ರ ಸಲ್ಲಿಸಿದರು. ಕ್ಷೇತ್ರದಲ್ಲಿ ಚುನಾವಣೆ ಉಸ್ತುವಾರಿ ಯಾರು ವಹಿಸಬೇಕು, ಪ್ರಚಾರ ಮತ್ತಿತರ ಪ್ರಮುಖ ಜವಾಬ್ದಾರಿಗಳನ್ನು ಯಾರು ನಿರ್ವಹಿಸಬೇಕು ಎಂಬ ಬಗ್ಗೆ ಈವರೆಗೂ ಸ್ಪಷ್ಟತೆ ಇಲ್ಲವಾಗಿದೆ.

ADVERTISEMENT

ಜಿಲ್ಲೆಯ ಮಟ್ಟಿಗೆ ಪಕ್ಷದ ಹಿರಿಯರೆನಿಸಿಕೊಂಡಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಶಿರಾಗೆ ಹೊಂದಿಕೊಂಡಿರುವ ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು, ಕುಣಿಗಲ್ ಮಾಜಿ ಶಾಸಕ ಡಿ.ನಾಗರಾಜಯ್ಯ ಅವರಂತಹ ಹಿರಿಯರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಶ್ರೀನಿವಾಸ್, ಸುರೇಶ್ ಬಾಬು ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ನಾಯಕರು ಬಂದಾಗ ಕ್ಷೇತ್ರಕ್ಕೆ ಹೋಗಿ ಬರುತ್ತಿದ್ದಾರೆ. ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸ್ವಲ್ಪಮಟ್ಟಿಗೆ ಪ್ರಚಾರ ನಡೆಸಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಚಟುವಟಿಕೆಗಳು ಗೋಚರಿಸುತ್ತಿಲ್ಲ.

ನೆಪಮಾತ್ರ: ಶಿರಾ ಕ್ಷೇತ್ರದ ಪ್ರಮುಖ ನಾಯಕರು ಬಿಜೆಪಿ, ಕಾಂಗ್ರೆಸ್ ಸೇರಿದ್ದು, ಉಳಿದಿರುವ ಬೆರಳೆಣಿಕೆಯಷ್ಟು ನಾಯಕರೂ ಉತ್ಸಾಹ ತೋರುತ್ತಿಲ್ಲ. ನಾವೂ ಪ್ರಚಾರದಲ್ಲಿ ಇದ್ದೇವೆ ಎಂಬಂತೆ ಸುತ್ತಾಟ ನಡೆಸಿದ್ದಾರೆ. ಅಮ್ಮಾಜಮ್ಮ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿಲ್ಲ. ಹೀಗಾಗಿ
ಇನ್ನೂ ಪ್ರಚಾರಕ್ಕೆ ಇಳಿದಿಲ್ಲ. ಪುತ್ರ ಸತ್ಯಪ್ರಕಾಶ್ ಸ್ವಲ್ಪಮಟ್ಟಿಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಚುನಾವಣೆ ಗೆಲುವಿಗೆ ಕಾರ್ಯತಂತ್ರ ರೂಪಿಸುವಷ್ಟು ಶಕ್ತರಲ್ಲ. ಅಳಿದುಳಿದಿರುವ ಸ್ಥಳೀಯ ನಾಯಕರೇ ತಮಗೆ ಬೇಕಾದ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಯಾರೊಬ್ಬರೂ ಚುನಾವಣೆಯ ನೇತೃತ್ವವಹಿಸಿಕೊಳ್ಳಲು ಸಿದ್ಧರಿಲ್ಲ.

ಸ್ಥಳೀಯ ಮಟ್ಟದ ನಾಯಕರ ಪಕ್ಷಾಂತರದಿಂದ ಪ್ರಚಾರ ಸೇರಿದಂತೆ ಚುನಾವಣೆಯ ಎಲ್ಲಾ ಉಸ್ತುವಾರಿಯನ್ನೂ ಕುಮಾರಸ್ವಾಮಿ ಅವರೇ ನೋಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಇದ್ದರೂ, ನಾಯಕತ್ವದ ಕೊರತೆ ಕಾಡುತ್ತಿದೆ. ಜೆಡಿಎಸ್ ಪರವಾಗಿ ಇರುವ ಮತಗಳನ್ನು ಕ್ರೋಡೀಕರಿಸಲು ನಾಯಕರು ಪ್ರಯಾಸಪಡುತ್ತಿದ್ದಾರೆ. ಈ ಅವಕಾಶವನ್ನು ಇತರ ಪಕ್ಷಗಳು ಚೆನ್ನಾಗಿ ಬಳಸಿಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.