ತುಮಕೂರು: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎನ್.ರಾಜಣ್ಣ ಅವರ ನಿವಾಸಕ್ಕೆ ಶಿರಾ ಉಪಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಟಿ.ಬಿ.ಜಯಂದ್ರ ಹಾಗೂ ಅವರ ಪತ್ನಿ ಭಾನುವಾರ ಭೇಟಿ ನೀಡಿದರು.
ರಾಜಣ್ಣ ಸಹ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದರೆ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ರಾಜಣ್ಣ ಜತೆ ಮಾತುಕತೆ ನಡೆಸಿದರು. ಆ ನಂತರ ಹೈಕಮಾಂಡ್ಗೆ ಜಯಚಂದ್ರ ಹೆಸರನ್ನು ಮಾತ್ರ ಶಿಫಾರಸು ಮಾಡಲಾಗಿತ್ತು. ನಾನು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತೇನೆ ಎಂದು ರಾಜಣ್ಣ ತಿಳಿಸಿದ್ದರು.
ಕಳೆದ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌರ ವಿರುದ್ಧ ರಾಜಣ್ಣ ಕೆಲಸ ಮಾಡಿದ್ದರು. ‘ನನ್ನ ಪಕ್ಕದ ಮನೆಗೆ ದೇವೇಗೌಡರು ಬಂದಿದ್ದರು. ಆದರೆ ನನ್ನ ಮನೆಗೆ ಬರಲಿಲ್ಲ. ಇದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿತ್ತು. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದೆ’ ಎಂದು ಹೇಳಿದ್ದರು.
ಶಿರಾದಲ್ಲಿ ನನಗೆ ಗೆಲ್ಲಿಸುವ ಮತ್ತು ಸೋಲಿಸುವ ಶಕ್ತಿ ಇದೆ ಎಂದು ರಾಜಣ್ಣ ಬಹಿರಂಗವಾಗಿ ಹೇಳಿದ್ದರು. ಜಯಚಂದ್ರ ಮತ್ತು ಡಾ.ಜಿ.ಪರಮೇಶ್ವರ ಅವರನ್ನು ರಾಜಣ್ಣ ಆಗಾಗ್ಗೆ ಟೀಕಿಸುತ್ತಲೇ, ಜಿಲ್ಲಾ ಕಾಂಗ್ರೆಸ್ನಲ್ಲಿ ತಮ್ಮದೇ ಆದ ಬಣ ಕಟ್ಟಿದ್ದರು.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡರ ವಿರುದ್ಧ ಕೆಲಸ ಮಾಡಿದ ಆರೋಪದ ಉಚ್ಚಾಟನೆಯಾಗಿದ್ದ ಮಧುಗಿರಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಮಧುಗಿರಿ ಪಟ್ಟಣ ಘಟಕದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಅವರ ಉಚ್ಚಾಟನೆ ಆದೇಶವನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಪಸ್ ಪಡೆದಿದ್ದಾರೆ. ಈ ಇಬ್ಬರು ರಾಜಣ್ಣ ಅವರ ಬೆಂಬಲಿಗರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.