ADVERTISEMENT

S. L. Bhyrappa: ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪ ನಿಧನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 12:19 IST
Last Updated 24 ಸೆಪ್ಟೆಂಬರ್ 2025, 12:19 IST
   

ಮೈಸೂರು: ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ಕಾದಂಬರಿಕಾರ ಪ್ರೊ.ಎಸ್‌.ಎಲ್‌.ಭೈರಪ್ಪ (94) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ  ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 2.38ಕ್ಕೆ ಹೃದಯಾಘಾತದಿಂದ ನಿಧನರಾದರು. 

ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ನಿವಾಸದಲ್ಲಿದ್ದ ಅವರನ್ನು 6 ತಿಂಗಳ ಹಿಂದೆ ಅನಾರೋಗ್ಯ ಕಾರಣ ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.  ಅವರಿಗೆ ಪತ್ನಿ ಸರಸ್ವತಿ, ಪುತ್ರರಾದ ರವಿಶಂಕರ್ ಹಾಗೂ ಉದಯಶಂಕರ್‌ ಇದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ 1934 ಆಗಸ್ಟ್ 20ರಂದು ಲಿಂಗಣ್ಣಯ್ಯ– ಗೌರಮ್ಮ ದಂಪತಿಯ ಪುತ್ರರಾಗಿ ಜನಿಸಿದ ಅವರು, ಬಾಗೂರು, ನುಗ್ಗೇಹಳ್ಳಿ ಶಾಲೆಗಳಲ್ಲಿ ಪ್ರಾಥಮಿಕ, ಮೈಸೂರಿನ ಶಾರದಾವಿಲಾಸದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಮಹಾರಾಜ ಕಾಲೇಜಿನಲ್ಲಿ ಬಿ.ಎ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ 2 ಚಿನ್ನದ ಪದಕಗಳೊಂದಿಗೆ ಎಂ.ಎ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದರು.  

ADVERTISEMENT

ಬರೋಡದ ಸಯ್ಯಾಜಿರಾವ್‌ ವಿಶ್ವವಿದ್ಯಾಲಯದಲ್ಲಿ ‘ಸತ್ಯ ಮತ್ತು ಸೌಂದರ್ಯ’ ಪ್ರಬಂಧಕ್ಕೆ ಪಿ.ಎಚ್‌ಡಿ ಪದವಿ ಪಡೆದ ನಂತರ ಅವರು, ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜು, ಗುಜರಾತ್‌ನ ಸರ್ದಾರ್ ವಲ್ಲಭಬಾಯಿ ಪಟೇಲ್‌ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. 

ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ (ಎನ್‌ಸಿಇಆರ್‌ಟಿ) 1967–71ರವರೆಗೆ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಮೈಸೂರಿಗೆ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾದ ಅವರು, ತತ್ವಶಾಸ್ತ್ರ ಮತ್ತು ಶಿಕ್ಷಣ ವಿಜ್ಞಾನದ ಪ್ರಾಧ್ಯಾಪಕರಾಗಿ 1991ರಲ್ಲಿ ನಿವೃತ್ತರಾದರು. 

ವಿದ್ಯಾರ್ಥಿಯಾಗಿದ್ದಾಗಲೇ ‘ಭೀಮಕಾಯ’, ‘ಬೆಳಕು ಮೂಡಿತು’ ಕಾದಂಬರಿಗಳನ್ನು ಬರೆದಿದ್ದ ಅವರ ಮೊದಲ ಕಾದಂಬರಿ ‘ಧರ್ಮಶ್ರೀ’ 1961ರಲ್ಲಿ ‍ಪ್ರಕಟಗೊಂಡಿತ್ತು. ದೂರ ಸರಿದರು (1962), ಮತದಾನ, ವಂಶವೃಕ್ಷ (1965), ಜಲಪಾತ (1967), ನಾಯಿನೆರಳು (1968), ತಬ್ಬಲಿಯು ನೀನಾದೆ ಮಗನೆ (1970), ಗೃಹಭಂಗ (1970), ನಿರಾಕರಣ (1971), ಗ್ರಹಣ (1972), ದಾಟು (1973), ಅನ್ವೇಷಣ (1976), ಪರ್ವ (1979), ನೆಲೆ (1983), ಸಾಕ್ಷಿ (1986), ಅಂಚು (1990), ತಂತು (1993), ಸಾರ್ಥ (1998), ಮಂದ್ರ (2002), ಆವರಣ (2007), ಕವಲು (2010), ಯಾನ (2014), ಉತ್ತರಕಾಂಡ (2017) ಅವರ ಕಾದಂಬರಿಗಳು. 

ಭಿತ್ತಿ (1996) ಅವರ ಆತ್ಮಕಥನ, ಸಾಹಿತ್ಯ ಮತ್ತು ಪ್ರತೀಕ (1966), ಸತ್ಯ ಮತ್ತು ಸೌಂದರ್ಯ (1967), ಕಥೆ ಮತ್ತು ಕಥಾವಸ್ತು (1969) ಅವತ ಸಾಹಿತ್ಯ ಮೀಮಾಂಸೆ ಮತ್ತು ಚಿಂತನಾ ಕೃತಿಗಳಾಗಿವೆ. ಹಿಂದೂಸ್ತಾನಿ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು ‘ಗಂಗೂಬಾಯಿ ಹಾನಗಲ್’ ಕೃತಿಯ ಸಂಪಾದಕರೂ ಆಗಿದ್ದರು. 

ವಂಶವೃಕ್ಷ ಕಾದಂಬರಿಗೆ 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ, ದಾಟು ಕಾದಂಬರಿಗೆ 1975ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, 1985ರಲ್ಲಿ ಮಾಸ್ತಿ, 2005ರಲ್ಲಿ ಪಂಪ ಪ್ರಶಸ್ತಿ, 2010ರಲ್ಲಿ ಸರಸ್ವತಿ ಸಮ್ಮಾನ್, 2011ರಲ್ಲಿ ನಾಡೋಜ, 2014ರಲ್ಲಿ ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ, 2017ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ದೊರೆತಿದೆ. 

2014ರಲ್ಲಿ ನ್ಯಾಷನಲ್‌ ರೀಸರ್ಚ್‌ ಫ್ರೊಫೆಸರ್, 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಗೌರವಕ್ಕೆ ಭಾಜನರಾಗಿದ್ದ ಅವರಿಗೆ ಕೇಂದ್ರ ಸರ್ಕಾರವು 2016ರಲ್ಲಿ ಪದ್ಮಶ್ರೀ, 2023ರಲ್ಲಿ ಪದ್ಮಭೂಷಣ ಪುರಸ್ಕಾರ ನೀಡಿತ್ತು.   

ಭೈರಪ್ಪ ಅವರ ಕಾದಂಬರಿಗಳು ಭಾರತದ ವಿವಿಧ ಭಾಷೆಗಳಿಗೆ ಅನುವಾದವಾಗಿವೆ. ವಂಶವೃಕ್ಷ, ಸಾಕ್ಷಿ ಮತ್ತು ಪರ್ವ ಕೃತಿಗಳು ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ. 

‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೇ’ ಕಾದಂಬರಿಗಳನ್ನು ಗಿರೀಶ್‌ ಕಾರ್ನಾಡ್‌ ಮತ್ತು ಬಿ.ವಿ.ಕಾರಂತ ಚಲನಚಿತ್ರವಾಗಿಸಿದ್ದರು. ಮತದಾನ ಚಿತ್ರವಾಗಿ, ಗೃಹಭಂಗ ಧಾರಾವಾಹಿಯಾಗಿ ಟಿ.ಎನ್.ಸೀತಾರಾಮ್ ನಿರ್ದೇಶಿಸಿದ್ದರು. ಗಿರೀಶ್‌ ಕಾಸರವಳ್ಳಿ ‘ನಾಯಿನೆರಳು’ ಕಾದಂಬರಿಯನ್ನು ಅದೇ ಹೆಸರಿನಲ್ಲಿ ತೆರೆಯ ಮೇಲೆ ತಂದಿದ್ದರು. ಚಿತ್ರಗಳಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳೂ ಸಂದಿದ್ದವು. 

‘ಪುತ್ರ ರವಿಶಂಕರ್ ಲಂಡನ್‌ನಲ್ಲಿದ್ದು, ಗುರುವಾರ ಬೆಳಿಗ್ಗೆ ಆಗಮಿಸಲಿದ್ದಾರೆ. ಹುಟ್ಟೂರು ಸಂತೇಶಿವರದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ’  ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.