
ಮೋದಿ, ಭೈರಪ್ಪ
ಮೈಸೂರು: ‘2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಹೆಚ್ಚೆಚ್ಚು ಬಹುಮತದಿಂದ ಗೆಲ್ಲಬೇಕು. ನಂತರ ನಿವೃತ್ತಿಗೊಳ್ಳಬೇಕು. ಅಲ್ಲಿಯವರೆಗೆ, ಅವರಂತೆಯೇ ಇರುವವರನ್ನು ತಯಾರು ಮಾಡಬೇಕು’ ಎಂದು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಸಲಹೆ ನೀಡಿದ್ದರು.
ಪದ್ಮಭೂಷಣ ಪುರಸ್ಕಾರ ದೊರೆತಿದ್ದಕ್ಕೆ, ಇಲ್ಲಿನ ಕುವೆಂಪುನಗರದ ತಮ್ಮ ನಿವಾಸದಲ್ಲಿ ಜಿಲ್ಲಾಡಳಿತದಿಂದ 2023ರ ಜ.26ರಂದು ಅಭಿನಂದನೆ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದ್ದರು.
‘ಮೋದಿ ಕಾರಣದಿಂದಲೇ ನನಗೆ ಈ ಪುರಸ್ಕಾರ ದೊರೆತಿದೆ, ಇಲ್ಲದಿದ್ದರೆ ಬರುತ್ತಿರಲಿಲ್ಲ. ಇದರಿಂದ ಖುಷಿಯಾಗಿದೆ. ಪ್ರಶಸ್ತಿ ಕೊಟ್ಟರೆಂಬ ಕಾರಣಕ್ಕೆ ಅವರ ಸರ್ಕಾರವನ್ನು ಹೊಗಳುವುದಿಲ್ಲ. ದೇಶದಲ್ಲಿ ಮೋದಿ ಸರ್ಕಾರದಂತಹ ಸರ್ಕಾರ ಇದುವರೆಗೆ ಬಂದಿರಲಿಲ್ಲ. ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡವರು, ಧೈರ್ಯ ಇರುವಂಥವರು ಇದುವರೆಗೆ ಯಾರೂ ಬಂದಿರಲಿಲ್ಲ’ ಎಂದಿದ್ದರು.
‘ಪದ್ಮಭೂಷಣ ಪುರಸ್ಕಾರ ಸಿಕ್ಕಿದ್ದಕ್ಕಿಂತಲೂ, ನನ್ನ ಪುಸ್ತಕಗಳನ್ನು ಲಕ್ಷಾಂತರ ಮಂದಿ ಓದಿ ಸಂತೋಷಪಟ್ಟಿರುವುದು ಹೆಚ್ಚಿನ ಖುಷಿ ಕೊಡುತ್ತದೆ. ನನಗೀಗ 92 ವರ್ಷ ವಯಸ್ಸು. ನಾನು ಸತ್ತ ಮೇಲೂ ನನ್ನ ಪುಸ್ತಕಗಳು ಬದುಕುತ್ತವೆಯೇ, ಪ್ರಸ್ತುತವಾಗಿರುತ್ತವೆಯೇ? ಪ್ರಸ್ತುತವಾದರೆ ಅದೇ ನಿಜವಾದ ಪ್ರಶಸ್ತಿ’ ಎಂದು ಆಗ ಹೇಳಿದ್ದರು.
‘ಈಗ ದೇಶ ಬಹಳ ಪ್ರಗತಿ ಸಾಧಿಸಿದೆ. ಅಂತೆಯೇ ಸವಾಲುಗಳೂ ಇವೆ. ವಿದೇಶದಲ್ಲಿ ಸೋತವರು ಗೆದ್ದವರನ್ನು ಅಭಿನಂದಿಸುತ್ತಾರೆ. ಆದರೆ, ನಮ್ಮಲ್ಲಿ ಆ ರೀತಿ ಇಲ್ಲ. ವಿರೋಧ ಪಕ್ಷದಲ್ಲಿರುವವರು ಜವಾಬ್ದಾರಿ ತಿಳಿಯದೇ ಸದಾ ಬೈಗುಳದಲ್ಲಿ ತೊಡಗುತ್ತಿದ್ದಾರೆ’ ಎಂದು ವಿಷಾದಿಸಿದರು. ‘ಬೈಗುಳ ಬಿಟ್ಟು ಅಧ್ಯಯನ ಮಾಡಿ, ಅಂಕಿ–ಅಂಶಗಳನ್ನು ಇಟ್ಟುಕೊಂಡು, ಸರ್ಕಾರವು ಯಾವ್ಯಾವುದನ್ನು ಮಾಡಿಲ್ಲ ಎಂದು ಚರ್ಚಿಸಲಿ, ಆಗ, ಉತ್ತಮ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
‘ಏಕರೂಪ ನಾಗರಿಕ ಸಂಹಿತೆಯನ್ನು ಖಂಡಿತ ಜಾರಿಗೊಳಿಸಬೇಕು. ಎಲ್ಲ ಕಾನೂನು ಎಲ್ಲರಿಗೂ ಅನ್ವಯವಾಗಬೇಕು. ಮತಕ್ಕೋಸ್ಕರ ಒಂದು ವರ್ಗದ ಓಲೈಕೆ ಸರಿಯಲ್ಲ. ಅಲ್ಪಸಂಖ್ಯಾತರು ಬೇರೆ ಎಂದು ಮಾಡಿದ್ದೇಕೆ?’ ಎಂದು ಕೇಳಿದರು. ‘ಸ್ವಾತಂತ್ರ್ಯ ಬಂದ ನಂತರ ದೇಶಕ್ಕೆ ಸರಿಯಾದ ಅಡಿಪಾಯ ಹಾಕಲಿಲ್ಲ. ಇದರಿಂದ ಹಲವು ಸಮಸ್ಯೆಗಳಾಗಿವೆ’ ಎಂದು ವಿಶ್ಲೇಷಿಸಿದ್ದರು.
‘2002ರ ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವಿತ್ತು’ ಎಂದು ಆರೋಪಿಸಿ ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ‘ಈಗ ಅದು ಹೊರಬಂದಿದ್ದೇಕೆ? ಜಿ–20 ಶೃಂಗಸಭೆಗೆ ಉತ್ತಮ ಅರ್ಥಶಾಸ್ತ್ರಜ್ಞರನ್ನು ಆಯ್ಕೆ ಮಾಡಿದ್ದನ್ನು ತಡೆಯಲಾಗದೇ ಇಂಥದ್ದೆಲ್ಲ ಶುರು ಮಾಡಿಕೊಂಡಿದ್ದಾರೆ. ಹಳೆಯದ್ದನ್ನೆಲ್ಲಾ ಈಗ ತೆಗೆದಿದ್ದಾರೆ’ ಎಂದು ದೂರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.