ಬೆಂಗಳೂರು: ಬೆನ್ನಿಗಾನಹಳ್ಳಿ ಬಳಿಯ ಅಪಾರ್ಟ್ಮೆಂಟ್ ಸಮುಚ್ಚಯವೊಂದರ ನಾಲ್ಕನೇ ಮಹಡಿಯಿಂದ ಬಿದ್ದು ಸಾಫ್ಟ್ವೇರ್ ಎಂಜಿನಿಯರ್ (ಟೆಕಿ) ಉತ್ತಮ್ ಹೆಗಡೆ (30) ಎಂಬುವರು ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಗುರುವಾರ ನಸುಕಿನಲ್ಲಿ ಈ ಘಟನೆ ನಡೆದಿದ್ದು, ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತಮ್ ಹೆಗಡೆ, ಕುಟುಂಬದ ಜೊತೆ ಅಪಾರ್ಟ್ಮೆಂಟ್ ಸಮುಚ್ಚಯದ ಪ್ಲ್ಯಾಟ್ನಲ್ಲಿ ವಾಸವಿದ್ದರು. ಬುಧವಾರ ರಾತ್ರಿ ಕುಟುಂಬದವರ ಜೊತೆ ಸೇರಿ ಒಟ್ಟಿಗೆ ಊಟ ಮಾಡಿದ್ದರು. ನಂತರ, ಎಲ್ಲರೂ ಅವರವರ ಕೊಠಡಿಗೆ ಹೋಗಿ ಮಲಗಿದ್ದರು’ ಎಂದು ರಾಮಮೂರ್ತಿನಗರ ಠಾಣೆ ಪೊಲೀಸರು ಹೇಳಿದರು.
‘ನಸುಕಿನಲ್ಲಿ ಕೊಠಡಿಯಿಂದ ಹೊರಬಂದಿದ್ದರು ಎನ್ನಲಾದ ಉತ್ತಮ್, ನಾಲ್ಕನೇ ಮಹಡಿಯಿಂದ ಬಿದ್ದಿದ್ದರು. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಸಾವಿನ ಬಗ್ಗೆ ಕುಟುಂಬದವರಿಂದ ಹೇಳಿಕೆ ಪಡೆಯಲಾಗಿದೆ. ಇದೊಂದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ, ಅದಕ್ಕೆ ಕಾರಣ ಏನು ಎಂಬುದು ಇದುವರೆಗೂ ತಿಳಿದು ಬಂದಿಲ್ಲ’ ಎಂದೂ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.