ADVERTISEMENT

ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ; ಖಾತೆ ಹಂಚಿಕೆ ಬಗ್ಗೆ ಸಚಿವ ಬಿ.ಶ್ರೀರಾಮುಲು

ಖಾತೆ ಹಂಚಿಕೆ ಬಗ್ಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 11:47 IST
Last Updated 9 ಆಗಸ್ಟ್ 2021, 11:47 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಚಿತ್ರದುರ್ಗ: ನೂತನ ಸಚಿವ ಸಂಪುಟದ ಖಾತೆ ಹಂಚಿಕೆಯ ವಿಚಾರದಲ್ಲಿ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ. ಅಸಮಾಧಾನ ಇದ್ದರೂ ಸಮಾಧಾನದಿಂದ ಇರುವ ವ್ಯಕ್ತಿತ್ವ ನನ್ನದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಮಾಣವಚನ ಸ್ವೀಕರಿಸಿದ ಬಳಿಕ ತಿರುಪತಿಗೆ ತೆರಳಿದ್ದೆ. ದೇವರ ದರ್ಶನ ಪಡೆದು ಮರಳಿದ್ದೇನೆ. ರಾಜಕೀಯ ಬೆಳವಣಿಗೆಗಳ ಬಗ್ಗೆ ಮೌನವಹಿಸಿಲ್ಲ. ಯಾರು ಯಾವ ಖಾತೆ ನಿರ್ವಹಿಸಬೇಕು ಎಂಬುದು ಪಕ್ಷದ ಹಿರಿಯ ನಾಯಕರ ತೀರ್ಮಾನ’ ಎಂದು ಹೇಳಿದರು.

‘ಸತ್ಯಹರಿಶ್ಚಂದ್ರ ಅರಮನೆ ಹಾಗೂ ಸ್ಮಶಾನ ಎರಡನ್ನೂ ಸಮರ್ಥವಾಗಿ ನಿರ್ವಹಿಸಿದರು. ಅದೇ ರೀತಿ ನಾನೂ ಕೆಲಸ ಮಾಡಿಕೊಂಡು ಬಂದಿದ್ದೇನೆ. ಸ್ಮಶಾನದಲ್ಲಿ ಕೂಡ ಸೈ ಅನಿಸಿಕೊಳ್ಳುತ್ತೇನೆ. ಮೂವತ್ತು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ರಾಜಕೀಯ ಪ್ರವೇಶಿಸಿದ್ದು, ಸಚಿವನಾಗಿದ್ದು ಎಲ್ಲವೂ ಸವಾಲುಗಳೇ ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ADVERTISEMENT

‘ಸಾರಿಗೆ ಇಲಾಖೆ ಬಹಳಷ್ಟು ನಷ್ಟದಲ್ಲಿದೆ. ಇದನ್ನು ಲಾಭದತ್ತ ಕೊಂಡೊಯ್ಯವ ಸವಾಲು ನನ್ನ ಮುಂದಿದೆ. ಇಲಾಖೆಯನ್ನು ಲಾಭದತ್ತ ತೆಗದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ಬಿಎಂಟಿಸಿ ಬಸ್‌ ದರ ಏರಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಜನರಿಗೆ ಹೊರೆಯಾಗದಂತೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.