ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಬಹು ವರ್ಷಗಳ ಬೇಡಿಕೆಯಾಗಿರುವ ಸ್ಟೈ ಫಂಡ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದಾರೆ ಎಂದುತಿಳಿದು ಬಂದಿದೆ.
ಕೊರೊನಾ ಸೋಂಕಿತನ ಸಂಪರ್ಕದ ಹಿನ್ನೆಲೆಯಲ್ಲಿ ಸ್ವಯಂ ಗೃಹ ದಿಗ್ಬಂಧನದಲ್ಲಿರುವಸಚಿವರು ಮಂಗಳವಾರ ಇಲಾಖೆಯ ಪ್ರಮುಖರ ಜತೆ ನಡೆಸಿದ ವಿಡಿಯೊ ಸಮಾಲೋಚನೆ ಸಂದರ್ಭದಲ್ಲಿ ಈ ಕುರಿತು ಸೂಚನೆ ನೀಡಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದ ಪಿಜಿ ವಿದ್ಯಾರ್ಥಿಗಳು ಬಹು ದಿನಗಳ ಈ ಬೇಡಿಕೆಯನ್ನು ಮಾನ್ಯ ಮಾಡುವಂತೆ ಆಗ್ರಹಿಸಿದ್ದರು. ವಿಡಿಯೊ ಸಂವಾದದಲ್ಲಿ ಪಾಲ್ಗೊಂಡಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕುಲಪತಿ ಡಾ. ಸಚ್ಚಿದಾನಂದ ಮತ್ತು ಡಿಎಂಇ ಡಾ.ಗಿರೀಶ್ ಅವರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ಪಿಜಿ ವಿದ್ಯಾರ್ಥಿಗಳಿಗೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವ ಭತ್ಯೆ, ರಾಜ್ಯದಲ್ಲಿ ಯಾವ ವರ್ಷ ಎಷ್ಟು ಹೆಚ್ಚಳ ಮಾಡಲಾಗಿತ್ತು ಎಂಬ ವಿವರಗಳನ್ನು ಸಚಿವರು ಸಂವಾದ ಸಂದರ್ಭದಲ್ಲಿ ಪಡೆದರು. ಹೆಚ್ಚಳದ ಪ್ರಮಾಣ ಮತ್ತು ವಾರ್ಷಿಕ ಬೇಕಾದ ಅನುದಾನದ ಬಗ್ಗೆಯೂ ಮಾಹಿತಿ ಪಡೆದ ಸಚಿವರು, ಅಗತ್ಯ ಸೂಚನೆಗಳ ಸಹಿತ ಪರಿಷ್ಕರಣೆಗೆ ಕ್ರಮ ಜರುಗಿಸಲು ಸೂಚಿಸಿದರು ಎಂದು ಸಚಿವಾಲಯ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.