ADVERTISEMENT

ಕೊರೊನಾ ಸೋಂಕು ಹೆಚ್ಚಾದರೆ ಮಾತ್ರ ಲಾಕ್‌ಡೌನ್‌ ಜಾರಿಗೆ ಕ್ರಮ: ಸಚಿವ ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 13:06 IST
Last Updated 16 ಆಗಸ್ಟ್ 2021, 13:06 IST
ಕಂದಾಯ ಸಚಿವ ಆರ್‌.ಅಶೋಕ
ಕಂದಾಯ ಸಚಿವ ಆರ್‌.ಅಶೋಕ   

ಬೆಂಗಳೂರು: ‘ಕೋವಿಡ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಗೆ ತರುವ ಪರಿಸ್ಥಿತಿ ನಗರದಲ್ಲಿ ಸದ್ಯಕ್ಕೆ ಇಲ್ಲ. ಲಾಕ್‌ಡೌನ್‌ ಜಾರಿಯಾಗುತ್ತದೆ ಎಂದು ತಲೆಯಲ್ಲಿ ಇಟ್ಟುಕೊಳ್ಳುವುದು ಬೇಡ. ಕೋವಿಡ್‌ ಪ್ರಕರಣಗಳು ಎಷ್ಟು ಜಾಸ್ತಿ ಆಗುತ್ತವೆಯೋ ಅದರ ಆಧಾರದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ನಗರದಲ್ಲಿ 50 ದಿನಗಳಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ 300 ರಿಂದ 400 ನಡುವೆ ಇದೆ. ಇದು ಸಹಜ ಮಟ್ಟ. ಈ ಸಂಖ್ಯೆ ಏನಾದರೂ ಹೆಚ್ಚಾದರೆ ಕಠಿಣ ಕ್ರಮ ಕೈಗೊಳ್ಳುವತ್ತ ಸರ್ಕಾರ ಮುಂದಿನ ಹೆಜ್ಜೆ ಇಡುವುದು ಶೇ 100ರಷ್ಟು ನಿಶ್ಚಿತ. ಆಗ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸುವ ಕುರಿತು ಹಾಗೂ ರಾತ್ರಿ ಕರ್ಫ್ಯೂವನ್ನು ಇನ್ನಷ್ಟು ಬಿಗುಗೊಳಿಸುವ ಬಗ್ಗೆ ಯೋಚನೆ ಮಾಡುತ್ತೇವೆ. ಕೋವಿಡ್‌ ಹರಡುವುದನ್ನು ತಡೆಯಲು ಇಂತಹ ಕ್ರಮ ಕೈಗೊಳ್ಳುವುದು ಅನಿವಾರ್ಯ’ ಎಂದರು.

ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗುವುದನ್ನು ಹೇಗೆ ತಡೆಯುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ, ‘ಶ್ರಾವಣ ಶನಿವಾರ ಬಂದಿದೆ. ಹಿಂದು, ಮುಸ್ಲಿಂ ಹಾಗೂ ಕ್ರೈಸ್ತರ ಹಬ್ಬಗಳೂ ಈ ತಿಂಗಳಿನಲ್ಲಿ ಬರುತ್ತಿವೆ. ಆ ದೃಷ್ಟಿಯಿಂದ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮೂರು– ನಾಲ್ಕು ದಿನಗಳಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇನೆ. ಜನರ ಆರೋಗ್ಯ ನಮಗೆ ಮುಖ್ಯ. ಈ ದೃಷ್ಟಿಯಿಂದ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.