ADVERTISEMENT

ಬಾರಿಗೆ ತೆರಳಿದ ವಿದ್ಯಾರ್ಥಿಗಳಿಗೆ ಪಾಠ ಹೇಳಿದ ಪ್ರಾಂಶುಪಾಲ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 13:11 IST
Last Updated 7 ಫೆಬ್ರುವರಿ 2021, 13:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಡಿಕೇರಿ: ಕಾಲೇಜು ಅವಧಿಯಲ್ಲಿಯೇ ಸಮವಸ್ತ್ರದಲ್ಲಿ ಬಾರಿಗೆ ಹೋಗಿ ಪಾರ್ಟಿ ಮಾಡುತ್ತಿದ್ದ ಪದವಿ ಕಾಲೇಜಿನ ವಿದ್ಯಾರ್ಥಿಗಳನ್ನು ರೆಡ್‍ಹ್ಯಾಂಡ್ ಆಗಿ ಹಿಡಿದ ಪ್ರಾಂಶುಪಾಲರೊಬ್ಬರು ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿದ ಘಟನೆ ವಿರಾಜಪೇಟೆ ಪಟ್ಟಣದಲ್ಲಿ ಈಚೆಗೆ ನಡೆದಿದೆ.

ಪಟ್ಟಣದ ಕಾಲೇಜೊಂದರ ವಿದ್ಯಾರ್ಥಿಗಳು ಹಾಗೂ ಇತರ ವಿದ್ಯಾರ್ಥಿಗಳು ಪಟ್ಟಣದ ವ್ಯಾಪ್ತಿಯಲ್ಲಿನ ಬಾರೊಂದರಲ್ಲಿ ಬೆಳಿಗ್ಗೆ 10ರ ಸುಮಾರಿಗೆ ಪಾರ್ಟಿ ಮಾಡುತ್ತಿರುವ ಕುರಿತು ಮಾಹಿತಿ ಪಡೆದ ಆ ಕಾಲೇಜಿನ ಪ್ರಾಂಶುಪಾಲರು, ಕಾಲೇಜಿನ ಕೆಲ ಸಿಬ್ಬಂದಿ ವಿದ್ಯಾರ್ಥಿಗಳನ್ನು ಕರೆತರಲು ತಕ್ಷಣ ಬಾರಿನ ಸಮೀಪ ತೆರಳಿದ್ದಾರೆ.

ಪ್ರಾಂಶುಪಾಲರು ಬಾರಿನ ಹೊರಗೆ ಕಾದಿರುವ ವಿಚಾರ ತಿಳಿದ ಕೆಲವು ವಿದ್ಯಾರ್ಥಿಗಳು ಕೂಡಲೇ ಸ್ಥಳದಿಂದ ಪಲಾಯನ ಮಾಡಿದ್ದಾರೆ. ಆದರೂ, ಕೆಲವು ವಿದ್ಯಾರ್ಥಿಗಳು ಬಾರಿನಿಂದ ಹೊರಗೆ ಬರದಿರುವುದನ್ನು ಮನಗಂಡ ಪ್ರಾಂಶುಪಾಲರು ಬಾರಿನ ಒಳಗೆ ಹೋಗಿ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿದ್ದಾರೆ. ಬಳಿಕ ಬಾರಿನಲ್ಲಿದ್ದ ಮೇಲ್ವಿಚಾರಕನನ್ನು ಕುರಿತು ವಿದ್ಯಾರ್ಥಿಗಳಿಗೆ ಈ ವಿಚಾರದಲ್ಲಿ ಸಹಕಾರ ನೀಡುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡು ಎಚ್ಚರಿಸಿದ್ದಾರೆ.

ADVERTISEMENT

ಬಳಿಕ ವಿದ್ಯಾರ್ಥಿಗಳ ಪೋಷಕರನ್ನು ಕಾಲೇಜಿಗೆ ಕರೆಸಿ, ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಬುದ್ಧಿವಾದ ಹೇಳಿದ್ದಾರೆ. ಇಂತಹ ಘಟನೆ ಮತ್ತೊಮ್ಮೆ ಮರುಕಳಿಸಿದರೆ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ವಿದ್ಯಾರ್ಥಿಗಳಿಗೆ ಎಚ್ಚರಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಬಾರಿನಲ್ಲಿ ನಡೆದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಪ್ರಾಂಶುಪಾಲರು ಹಾಗೂ ಕಾಲೇಜಿನ ಸಿಬ್ಬಂದಿ ಕಾರ್ಯಕ್ಕೆ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.