ಬೆಂಗಳೂರು: ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ 10ನೇ ತರಗತಿಗೆ ಮತ್ತು 6ರಿಂದ 9ನೇ ತರಗತಿಗೆ ಆರಂಭಗೊಂಡ ‘ವಿದ್ಯಾಗಮ’ ಕಾರ್ಯಕ್ರಮಕ್ಕೆ ಹಾಜರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಯ ತಂತ್ರಾಂಶದಲ್ಲಿ (ಎಸ್ಎಸ್ಟಿ) ಶಾಲೆಗಳ ಮುಖ್ಯಶಿಕ್ಷಕರು ಕಡ್ಡಾಯವಾಗಿ ದಾಖಲಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
ಶುಕ್ರವಾರದಿಂದ (ಜ. 1) ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಗತಿ ಮತ್ತು 6ರಿಂದ 9ನೇ ತರಗತಿಯ ಮಕ್ಕಳಿಗೆ ‘ವಿದ್ಯಾಗಮ’ ಆರಂಭಗೊಂಡಿದೆ. ಆದರೆ, ಮುಖ್ಯಶಿಕ್ಷಕರು ಕ್ರಮಬದ್ಧವಾಗಿ ಮಾಹಿತಿಯನ್ನು ದಾಖಲಿಸಿಲ್ಲ. ಹೀಗಾಗಿ, ಬೆಳಗ್ಗಿನ ಅವಧಿಯ ಹಾಜರಾತಿ ಬಗ್ಗೆ ಮಧ್ಯಾಹ್ನ 12 ಗಂಟೆಯ ಒಳಗೆ ಮತ್ತು ಮಧ್ಯಾಹ್ನದ ಅವಧಿ ಹಾಜರಾತಿಯನ್ನು 3 ಗಂಟೆಯೊಳಗೆ ಪ್ರತಿ ದಿನ ದಾಖಲಿಸಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ, ಕೋವಿಡ್ ಕಾರಣದಿಂದ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಶಾಲೆಗಳಲ್ಲಿ ಪಾಲಿಸುತ್ತಿರುವ ಬಗ್ಗೆ ಇಬ್ಬರು ಸದಸ್ಯರ ಉಸ್ತುವಾರಿ ತಂಡ ಡಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು. ಲೋಪಗಳಾಗಿದ್ದರೆ ಕ್ರಮ ವಹಿಸಬೇಕು ಮತ್ತು ಈ ಕುರಿತು ಕ್ರೋಡೀಕರಿಸಿದ ವರದಿಯನ್ನು ಇಲಾಖೆಗೆ ಸಲ್ಲಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ.
ಶಾಲೆಗಳಲ್ಲಿ 10–15 ಮಕ್ಕಳಿಗೆ ಒಬ್ಬರಂತೆ ಮೆಂಟರ್ ಶಿಕ್ಷಕರನ್ನು ನೇಮಿಸಿ, ಅವರು ಆ ಮಕ್ಕಳ ಆರೋಗ್ಯ ಮತ್ತು ಹಾಜರಾತಿ ಬಗ್ಗೆ ನಿಗಾ ವಹಿಸುವಂತೆ ಸೂಚಿಸಬೇಕು ಎಂದೂ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.