ಬೆಂಗಳೂರು: ಸುಡಾನ್ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆ ತರಲು ‘ಆಪರೇಷನ್ ಕಾವೇರಿ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು ಶುಕ್ರವಾರ ತಾಯ್ನಾಡಿಗೆ 97 ಮಂದಿಯನ್ನು ಒಳಗೊಂಡ ಮತ್ತೊಂದು ತಂಡವು ಸುರಕ್ಷಿತವಾಗಿ ಮರಳಿತು.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರು ವಿಮಾನಗಳಲ್ಲಿ ಬಂದಿಳಿದರು. ಬೆಳಿಗ್ಗೆ 8ಕ್ಕೆ ಬಂದ ವಿಮಾನದಲ್ಲಿ 11 ಪುರುಷರು ಹಾಗೂ 7 ಮಂದಿ ಮಹಿಳೆಯರು ಸೇರಿದಂತೆ 18 ಮಂದಿ, ಬೆಳಿಗ್ಗೆ 10ಕ್ಕೆ ಬಂದ 2ನೇ ವಿಮಾನದಲ್ಲಿ 16 ಪುರುಷರು, 37 ಮಹಿಳೆಯರು ಸೇರಿದಂತೆ ಒಟ್ಟು 53 ಹಾಗೂ 3ನೇ ವಿಮಾನದಲ್ಲಿ 26 ಮಂದಿ ಪುರುಷರು ರಾಜ್ಯಕ್ಕೆ ವಾಪಸ್ಸಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.
ಸಂಘರ್ಷ ಪೀಡಿತ ಸುಡಾನ್ನಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಿ ಕರೆತರುವ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗೂ ರಾಜ್ಯದ 439 ಮಂದಿಯನ್ನು ಸುರಕ್ಷಿತವಾಗಿ ಕರೆತರಲಾಗಿದೆ. ವಿಮಾನ ನಿಲ್ದಾಣದಿಂದ ಅವರ ಸ್ವಂತ ಊರುಗಳಿಗೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಂದವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕೆಲವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.