ADVERTISEMENT

ಕೋವಿಡ್‌: ಶ್ರೀರಾಮುಲು ಬದಲು ಸುಧಾಕರ್‌ಗೆ ಹೊಣೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 12:28 IST
Last Updated 24 ಮಾರ್ಚ್ 2020, 12:28 IST
ಸಚಿವ ಶ್ರೀರಾಮುಲು ಮತ್ತು ಡಾ.ಕೆ.ಸುಧಾಕರ್
ಸಚಿವ ಶ್ರೀರಾಮುಲು ಮತ್ತು ಡಾ.ಕೆ.ಸುಧಾಕರ್   

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ಹಾಗೂ ನಿಯಂತ್ರಣದ ಉದ್ದೇಶದಿಂದ 'ಕೋವಿಡ್‌–19’ ಉಸ್ತುವಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ವಹಿಸಿ ರಾಜ್ಯಪಾಲ ವಜುಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ.

ಕೊರೊನಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಭಾವಣೆ ಹಾಗೂ ನಿಯಂತ್ರಣದ ಹೊಣೆ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಇರುವುದು ಸಾಮಾನ್ಯ. ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಇದ್ದ ಜವಾಬ್ದಾರಿಯನ್ನು ಹಿಂಪಡೆದಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈ ಹೊಣೆಯನ್ನುಸುಧಾಕರ್‌ಗೆ ವಹಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಇದರನ್ವಯ ರಾಜ್ಯಪಾಲರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಟ್ಟ ಅವಧಿಯಲ್ಲಿ ಶ್ರೀರಾಮುಲು ಅವರು ತಮ್ಮ ಮಗಳ ಮದುವೆ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದರು. ಆ ವೇಳೆಯಲ್ಲಿ ಸುಧಾಕರ್ ಅವರೇ ಸೋಂಕು ಹರಡುವಿಕೆ ತಡೆಗೆ ಸಂಬಂಧ ಪಟ್ಟ ಚಟುವಟಿಕೆಗಳ ಮೇಲುಸ್ತುವಾರಿ ವಹಿಸಿದ್ದರು. ಕೊರೊನಾ ಸೋಂಕು ತಡೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುವಾಗಲೂ ಸಿದ್ಧತೆ ಇಲ್ಲದೇ ಬರುತ್ತಿದ್ದ ರಾಮುಲು ತಪ್ಪು ಮಾಹಿತಿ ನೀಡಿ, ಗೊಂದಲ ಮೂಡಿಸಿದ ಪ್ರಕರಣಗಳು ನಡೆದಿದ್ದವು.

ADVERTISEMENT

ಸೋಮವಾರದಂದು ಕೊರೊನಾ ಸೋಂಕಿತರ ಸಂಖ್ಯೆ 33ಕ್ಕೆ ಏರಿದ್ದರೂ ರಾಮುಲು ಅವರು ಈ ಸಂಖ್ಯೆಯನ್ನು 27 ಎಂದೇ ಪ್ರತಿಪಾದಿಸಿದ್ದರು. ಇದರಿಂದಾಗಿ ವಿಧಾನಸಭೆ ಮತ್ತು ವಿಧಾನನಪರಿಷತ್ತಿನಲ್ಲಿ ಸರ್ಕಾರ ಮುಜುಗರ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಕಾರಣಕ್ಕಾಗಿಯೇ ರಾಮುಲು ಅವರಿಗೆ ಇದ್ದ ಹೊಣೆಯನ್ನು ಕಿತ್ತುಕೊಂಡು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುವುದನ್ನು ಅರಿತಿರುವ ಸುಧಾಕರ್‌ಗೆ ಜವಾಬ್ದಾರಿ ವಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.