
ಸುನಿಲ್ಕುಮಾರ್, ಡಿಕೆಶಿ
ಸುವರ್ಣ ವಿಧಾನಸೌಧ(ಬೆಳಗಾವಿ): ‘ಕಾಣುವ ಕುರ್ಚಿಗೆ ಹಂಬಲಿಸಿದೆ ಮನ....ಕೊಡಬಲ್ಲನೇ ಒಂದು ದಿನ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಉದ್ದೇಶಿಸಿ ಕಾವ್ಯಾತ್ಮಕವಾಗಿ ಹೇಳಿದ್ದು ಬಿಜೆಪಿಯ ವಿ. ಸುನಿಲ್ಕುಮಾರ್.
ಮೇಕೆದಾಟು ಯೋಜನೆ ಕುರಿತು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರ ಪ್ರಶ್ನೆಗೆ ಉತ್ತರಿಸಲು ನಗುತ್ತಾ, ಕೈಮುಗಿದು ಹರ್ಷ ಭರಿತರಾಗಿ ಎದ್ದು ನಿಂತ ಶಿವಕುಮಾರ್ ಅವರನ್ನು ಸುನಿಲ್ ಕಾಲೆಳೆದ ಪರಿ ಇದು.
‘ಅದೇ ಡಿ.ಕೆ.ಶಿವಕುಮಾರಾ ಅಥವಾ ಹೊಸ ಡಿ.ಕೆ.ಶಿವಕುಮಾರಾ? ಡಿ.ಕೆ.ಶಿವಕುಮಾರ್ ಎಂಬುದಕ್ಕೆ ಒಂದು ಕಲ್ಪನೆ ಇದೆ. ದಿಢೀರ್ ಆಗಿ ಇಷ್ಟು ನಯ, ವಿನಯ ಎಲ್ಲಿಂದ ಹೇಗೆ ಬಂತು? ಈ ಸಂದರ್ಭದಲ್ಲಿ ಸಿ.ಅಶ್ವತ್ದ್ ಅವರು ಹಾಡಿದ ಭಾಗೀತೆಯ ನೆನಪು ಬರುತ್ತದೆ. ಕಾಣದ ಕಡಲಿಗೆ ಹಂಬಲಿಸಿದೆ ಮನ. ಕಾಣಬಲ್ಲನೆ ಒಂದು ದಿನ ಅಂತ... ಆ ಪ್ರಕಾರ ಶಿವಕುಮಾರ ಅವರು ಕಾಣುವ ಕುರ್ಚಿಗೆ ಹಂಬಲಿಸಿದೆ ಮನ... ಕೊಡಬಲ್ಲನೇ ಒಂದು ದಿನ ಎಂದು ಹೇಳುತ್ತಿದ್ದಾರೆ’ ಎಂದು ಸುನಿಲ್ ಕಿಚಾಯಿಸಿದಾಗ, ಶಿವಕುಮಾರ್ ನಗುತ್ತಲೇ ತಲೆ ಆಡಿಸಿದರು.
‘ನಿಜವಾಗಿಯೂ ನಿಮಗೆ ವಿಪಕ್ಷದ ಬಗ್ಗೆ ನಯ ವಿನಯ ಶುರುವಾದರೆ ನಿಮ್ಮ ನಾಯಕತ್ವವನ್ನು ಒಪ್ಪುತ್ತೇವೆ. ಆದರೆ ನೀವು ಈ ರೀತಿ ನಯ ವಿನಯ ತೋರಿಸಿದರೆ ಹೇಗೆ’ ಎಂದು ಸುನಿಲ್ ಪ್ರಶ್ನಿಸಿದರು.
ಜತೆಯಾಗೇ ಹೋಗೋಣ:
‘ಮೇಕೆದಾಟು ಯೋಜನೆ ಆರಂಭಿಸುವ ಕುರಿತು ನಮ್ಮದೇನೂ ಇಲ್ಲ ಸರ್ಕಾರವೇ ತೀರ್ಮಾನ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೇಂದ್ರ ಜಲಮಂಡಳಿಗೆ ಹೊಸದಾಗಿ ಅರ್ಜಿ ಹಾಕುತ್ತೇವೆ. ಪರಿಷ್ಕೃತ ಡಿಪಿಆರ್ ಸಿದ್ಧ ಮಾಡಿಕೊಡುತ್ತೇವೆ. ಆದಷ್ಟು ಬೇಗ ನಿಮ್ಮ ಎಲ್ಲರನ್ನೂ ಕರೆದುಕೊಂಡು ಹೋಗಿ ಭೂಮಿ ಪೂಜೆ ಮಾಡುತ್ತೇನೆ. ನಿಮ್ಮೆಲ್ಲರ ಸಹಕಾರ ಬೇಕು’ ಎಂದು ಶಿವಕುಮಾರ್ ಕೈಮುಗಿದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.