ADVERTISEMENT

ಕಾವೇರಿ ನೀರು ಹರಿಸಲು ಸುಪ್ರೀಂ ನಿರ್ದೇಶನ: ಮಂಡ್ಯ ‌ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 9:27 IST
Last Updated 21 ಸೆಪ್ಟೆಂಬರ್ 2023, 9:27 IST
   

ಮಂಡ್ಯ: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವುದನ್ನು ಖಂಡಿಸಿ ಜಿಲ್ಲೆಯ ವಿವಿಧೆಡೆ ವಿವಿಧ ಸಂಘಟನೆಗಳ ಮುಖಂಡರು ಗುರುವಾರ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

ನಗರದ ಜೆ.ಸಿ ವೃತ್ತದಲ್ಲಿ ಕನ್ನಡಸೇನೆ ಸದಸ್ಯರು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ‌ ಮಲಗಿ ಪ್ರತಿಭಟನೆ ನಡೆಸಿದರು. ಸುಪ್ರೀಂಕೋರ್ಟ್ ‌ಕರ್ನಾಟಕ ರಾಜ್ಯದ ವಿರುದ್ಧ ಮತ್ತೆ ಮತ್ತೆ ಮರಣಶಾಸನ ಬರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್.ಎಂ.ವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ‌ ಸದಸ್ಯರು‌ ಕೂಡ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸಂಕಷ್ಟ‌ ಕಾಲದಲ್ಲಿ ನೀರು‌ ಹರಿಸಲು ನಿರ್ದೇಶನ ನೀಡಿರುವುದು ಅವೈಜ್ಞಾನಿಕ ‌ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕೆಆರ್‌ಎಸ್ ಜಲಾಶಯದ ಪ್ರವೇಶ ದ್ವಾರದಲ್ಲಿ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಒಳನುಗ್ಗಲು ಯತ್ನಿಸಿದರು. ಕೈಗಾರಿಕಾ ಭದ್ರತಾ ಪಡೆದ ಸಿಬ್ಬಂದಿ ಪ್ರತಿಭಟನಾಕಾರರನ್ನು ತಡೆದರು.

ಶ್ರೀರಂಗಪಟ್ಟಣದಲ್ಲಿ‌ ಭೂಮಿತಾಯಿ‌ ಹೋರಾಟ ಸಮಿತಿ‌ ಸದಸ್ಯರು‌ ಕಾವೇರಿ ನದಿಗಿಳಿದು ಹೋರಾಟ ಮಾಡಿದರು. ಕರ್ನಾಟಕ ‌ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸುವಲ್ಲಿ‌ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.